ಡಿನೋಟಿಫಿಕೇಶನ್ ಪ್ರಕರಣ: ಸಿಎಂಗೆ ಸಂಕಷ್ಟ ಎದುರಾಗಲಿದೆಯೇ?
ಬೆಂಗಳೂರು, ಏಪ್ರಿಲ್ 27: ವಿಧಾನಸಭಾ ಚುನಾವಣೆಗೆ ಇನ್ನೇನು 14 ದಿನ ಬಾಕಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಮತ್ತು ಇತರ ಅಧಿಕಾರಿಗಳು ದೊಡ್ಡ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ!. ಹೌದು, ರಾಜ್ಯಪಾಲ ವಜುಬಾಯಿ ವಾಲ ಅವರು ರಾಜ್ಯಸರ್ಕಾರಕ್ಕೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದರ ಬಗ್ಗೆ ವಿವರಗಳನ್ನು ಕೇಳಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಪ್ರತ್ಯುತ್ತರ ನೀಡದಿರುವುದರಿಂದ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 300 ಕೋಟಿ ರೂಪಾಯಿ ನಷ್ಟವುಂಟುಮಾಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ರಾಜ್ಯ ಬಿಜೆಪಿ ಕೇಸು ದಾಖಲಿಸಿತ್ತು. ಬಿಜೆಪಿಯ ಇತರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಆರೋಪಿಸಿದ ನಂತರ ಬಿಜೆಪಿ ಈ ಕೇಸನ್ನು ದಾಖಲಿಸಿತ್ತು.

ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದಲ್ಲಿ ಸರ್ವೆ ನಂಬರ್ 20 ಮತ್ತು 21ರಲ್ಲಿ ಸುಮಾರು 6 ಎಕರೆಗಿಂತಲೂ ಅಧಿಕ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಕ್ಕೆ ಮುಖ್ಯಮಂತ್ರಿಯವರು ನೇರ ಹೊಣೆಗಾರರಾಗಿದ್ದಾರೆ. ಇವರ ಜೊತೆಗೆ ಕೆ.ಜೆ. ಜಾರ್ಜ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರ ಅಭಿವೃದ್ಧಿ), ಮಹೇಂದ್ರ ಜೈನ್ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳು ಅವರ ಸ್ನೇಹಿತ ರವಿಶಂಕರ್ ಶೆಟ್ಟಿ ಸಹಾಯದೊಂದಿಗೆ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಪುಟ್ಟಸ್ವಾಮಿ ಅವರು ಡಿಸೆಂಬರ್ 20, 2017 ರಂದು ಆರೋಪಿಸಿದ್ದು, ಈ ಪ್ರತಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರತಿಯನ್ನು ನೋಡಿದ ರಾಜ್ಯಪಾಲರು, ಈ ಕುರಿತು ಹೆಚ್ಚಿನ ವಿವರವನ್ನು ಕಳುಹಿಸಬೇಕೆಂದು ರಾಜ್ಯಸರ್ಕಾರಕ್ಕೆ ಕೇಳಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರದಿಂದ ಬಂದ ಉತ್ತರ ತೃಪ್ತಿಕರವಾಗಿಲ್ಲ. ಆದ್ದರಿಂದ ಇನ್ನು ಹೆಚ್ಚು ಮಾಹಿತಿ ಒದಗಿಸಲು ತಿಳಿಸಬೇಕೆಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಮಾಹಿತಿ ರವಾನಿಸಿದ್ದಾರಂತೆ.












Click it and Unblock the Notifications