ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ : ಸಚಿವ ಬೇಗ್
ಬೆಂಗಳೂರು, ಜ.05: ಉಡುಪಿಯಲ್ಲಿ ಪರ್ಯಾಯ ಪೀಠ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿರುವ ಸಂದರ್ಭದಲ್ಲೇ 'ಪರ್ಯಾಯ' ಪದ ಸಚಿವ ರೋಷನ್ ಬೇಗ್ ಅವರ ತಲೆ ಹೊಕ್ಕಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ನಗರದಿಂದ ಸಂಪರ್ಕ ಒದಗಿಸುವ ರಸ್ತೆಗೆ 'ಪರ್ಯಾಯ' ರಸ್ತೆ ನಿರ್ಮಾಣ ಮಾಡುವ ಯೋಜನೆಯ ಸುಳಿವು ನೀಡಿದ್ದಾರೆ. ಇದರ ಜೊತೆಗೆ ದೇವನಹಳ್ಳಿಯಲಿ 'ಪರ್ಯಾಯ' ಸಿನಿ ಲೋಕ ಸೃಷ್ಟಿಯ ಮಾತನ್ನಾಡಿದ್ದಾರೆ.[5 ಮಿನಿ ವಿಮಾನ ನಿಲ್ದಾಣ ಅಭಿವೃದ್ಧಿ, ಸಚಿವರ ಭರವಸೆ]
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಗ ಚಾಲ್ತಿಯಲ್ಲಿರುವ ರಸ್ತೆಯ ಜತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವಾರ್ತಾ ಮತ್ತು ಮೂಲಸೌಕರ್ಯ ಸಚಿವ ರೋಷನ್ ಬೇಗ್ ಘೋಷಿಸಿದ್ದಾರೆ. ಹಾಗೆ ನೋಡಿದರೆ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲೂ ಈ ರೀತಿ ಘೋಷಣೆ ಸಚಿವರಿಂದ ಬಂದಿತ್ತು.
ಮೂಲ ಸೌಕರ್ಯ ಅಭಿವೃದ್ಧಿ, ರಸ್ತೆ ನಿರ್ಮಾಣ, ಎಕ್ಸ್ ಪ್ರೆಸ್ ವೇ, ಕನ್ವೇಷನ್ ಸೆಂಟರ್, ಮಲ್ಟಿಪೆಕ್ಸ್, ಫಿಲಂಸಿಟಿ..ಇತ್ಯಾದಿ ವಿಷಯಗಳ ಬಗ್ಗೆ ಸಚಿವರು ಅಂದು ಮಾತನ್ನಾಡಿದ್ದರು. ಇಂದು ಅದೇ ಮಾತುಗಳನ್ನು ಪುನರುಚ್ಚರಿಸಿದರು. 500 ರಿಂದ 600 ಕೋಟಿ ರು ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕನ್ವೇಷನ್ ಸೆಂಟರ್ ನಿರ್ಮಾಣ ಮಾಡಲಾಗುವುದು ಎಂದರು.

ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ
ಸಂಚಾರ ದಟ್ಟಣೆ ವಿಮಾನ ನಿಲ್ದಾಣಕ್ಕೆ ತೆರಳುವ ಮಂದಿಗೆ ಸಂಚಾರ ದಟ್ಟಣೆಯಿಂದ ವಿಳಂಬವಾಗಬಾರದು ಎನ್ನುವ ಉದ್ದೇಶದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೋ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಅದಲ್ಲದೆ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಗರದಿಂದ ಪರ್ಯಾಯ ರಸ್ತೆ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ ತ್ವರಿತವಾಗಿ ಬೇಗನೆ ವಿಮಾನನಿಲ್ದಾಣ ತಲುಪಲು ಸಹಕಾರಿಯಾಗಲಿದೆ ಎಂದರು.

ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಇದರ ಪಕ್ಕದಲ್ಲಿಯೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಹೆಸರಘಟ್ಟದಲ್ಲಿ ಫಿಲಂಸಿಟಿ ನಿರ್ಮಾಣದ ಯೋಜನೆಯನ್ನು ಹಂಚಿಕೊಂಡರು.

ಹೈಸ್ಪೀಡ್ ರೈಲು ಮಾರ್ಗ ಯೋಜನೆ ಎಲ್ಲೆಲ್ಲಿ?
ಬೆಂಗಳೂರು-ಮೈಸೂರು, ಬೆಂಗಳೂರು-ಕೋಲಾರ ಹಾಗೂ ಬೆಂಗಳೂರು -ಹುಬ್ಬಳ್ಳಿ ಮಾರ್ಗದಲ್ಲಿ ಹೈಸ್ಪೀಡ್ ರೈಲುಗಳನ್ನು ಹೆಚ್ಚಾಗಿ ಓಡಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದರು.
ಇದರ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಮೆಟ್ರೋ ವಿವಿಧ ಹಂತದ ಕಾಮಗಾರಿಯನ್ನು ಚುರುಕುಗೊಳಿಸುವುದು, ನಗರ ಹೊರವಲಯಕ್ಕೆ ಸಂಪರ್ಕ ಒದಗಿಸುವುದು ಕೂಡಾ ಸರ್ಕಾರದ ಯೋಜನೆಯಲ್ಲಿದೆ.
ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದ ಬಗ್ಗೆ
ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದ ಬಗ್ಗೆ ವಿವರಣೆ ನೀಡಿದ ಸಚಿವರು 2007ರಲ್ಲೇ ಪ್ರವಾಸೋದ್ಯಮ ಇಲಾಖೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಮಾನ ನಿಲ್ದಾಣ ಹೊಂದಿರುವ 419 ಎಕರೆಗಳ ಪೈಕಿ 35 ಎಕರೆ ಮಂಜೂರಾಗಿದೆ. 500 ರಿಂದ 600 ಕೋಟಿ ರು ವೆಚ್ಚದ ಯೋಜನೆ ಇದಾಗಿದೆ. ಫಿಲಂ ಸಿಟಿ ನಿರ್ಮಾಣ ಹಲವು ದಶಕಗಳ ಕನಸಾಗಿದೆ. ದಿವಂಗತ ದೇವರಾಜ್ ಅರಸು ಕಾಲದಲ್ಲೇ 360 ಎಕರೆ ಇದಕ್ಕಾಗಿ ಮೀಸಲಿರಿಸಲಾಗಿದೆ. ಇದನ್ನು ಸಾಕಾರಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.












Click it and Unblock the Notifications