ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು
ಬೆಂಗಳೂರು, ನವೆಂಬರ್ 17 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕ ಪಥದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಸಾರ್ವಜನಿಕರಿಗೆ ಪಥದ ಕುರಿತು ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬಸ್ ಆದ್ಯತಾ ಪಥದ ಬಗ್ಗೆ ಜನರಿಗೆ ಮಾಹಿತಿ ನೀಡಿದೆ. ಬಸ್ ಪಥದಲ್ಲಿ ಬೇರೆ ವಾಹನಗಳು ಸಂಚಾರ ಮಾಡಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.
ನಾಗರೀಕರಿಗಾಗಿ, ಸುರಕ್ಷಿತ, ಸಮಗ್ರ, ಕೈಗೆಟುಕುವ ಮತ್ತು ವಿಶ್ವಾಸಾರ್ಹವಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸಲು ಬಸ್ ಆದ್ಯತಾ ಪಥವನ್ನು ರಚನೆ ಮಾಡಲಾಗಿದೆ.

ಬಸ್ಗಳ ಆದ್ಯತಾ ಮಾರ್ಗದಿಂದ ಬಸ್ಸುಗಳಿಗೆ ಅಗತ್ಯವಾದ ರಸ್ತೆ ಹಾಗೂ ವೇಗವನ್ನು ಸುಧಾರಿಸಲು ಅನುಕೂಲವಾಗುತ್ತದೆ. ಇದರಿಂದಾಗಿ ರಸ್ತೆಗಳಲ್ಲಿ ದಟ್ಟಣೆ ನಿವಾರಣೆಯಾಗಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗಲಿದೆ.
ಈ ಯೋಜನೆಯನ್ನು ನಗರದ 12 ಹೈಡೆನ್ಸಿಟಿ ಕಾರಿಡಾರ್ಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ಹಂತವಾದ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ನಿಂದ ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿವರೆಗೆ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ.
ಸೌಲಭ್ಯಗಳು : ಪ್ರತ್ಯೇಕ ಬಸ್ ಪಥದಲ್ಲಿ ಹಲವು ಸೌಲಭ್ಯಗಳಿವೆ. ಯಾವ-ಯಾವ ಸೌಲಭ್ಯಗಳಿವೆ ಎಂಬುದನ್ನು ಬಿಎಂಟಿಸಿ ಪಟ್ಟಿ ಮಾಡಿದೆ.
* ರಸ್ತೆಯ ಎರಡೂ ದಿಕ್ಕಿನಲ್ಲಿ ಬಿಎಂಟಿಸಿ ಬಸ್ಗಳಿಗೆ ಮೀಸಲಾದ ಒಂದು ಪಥ
* 800ಕ್ಕೂ ಅಧಿಕ ಬಸ್ಗಳ ಕಾರ್ಯಾಚರಣೆ
* ಪಥದಲ್ಲಿ ಸಂಚಾರ ನಡೆಸುವ ಬಸ್ಗಳಿಗೆ ಪ್ರತ್ಯೇಕ ಪಥ ಮತ್ತು ಲಾಂಛನ
* ಸುಲಲಿತ ಸಂಚಾರಕ್ಕಾಗಿ ಜಂಕ್ಷನ್ ಮರು ವಿನ್ಯಾಸ
* ಗುರುತು ಪಟ್ಟಿಗಳು ಹಾಗೂ ಸೂಚನಾ ಪಟ್ಟಿಗಳ ಅಳವಡಿಕೆ
* ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಸುಧಾರಿತ ಬಸ್ ತಂಗುದಾಣಗಳು, ಪಾದಚಾರಿ ಸ್ಕೈವಾಕ್ ಮತ್ತು ಪಾರ್ಕಿಗ್ ವ್ಯವಸ್ಥೆ
* ಬಸ್ ಸಂಚಾರದ ಆನ್ಲೈನ್ ಮೇಲ್ವಿಚಾರಣೆ ಮತ್ತು ವೇಳಾಪಟ್ಟಿ, ಸಿಸಿಟಿವಿ ವ್ಯಾಪ್ತಿ
* ಸದರಿ ಪಥದಲ್ಲಿ ಬಿಎಂಟಿಸಿ ಬಸ್, ತುರ್ತು ವಾಹನಗಳಾದ ಆಂಬುಲೆನ್ಸ್, ಅಗ್ನಿ ವಾಹಕಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನಗಳ ಪ್ರವೇಶ, ನಿಲುಗಡೆ ನಿಷೇಧ












Click it and Unblock the Notifications