ಗೀತಾವಿಷ್ಣು ಮಡಿಕೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದು ಹೇಗೆ?
ಬೆಂಗಳೂರು, ಅಕ್ಟೋಬರ್ 04 : ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಗೀತಾವಿಷ್ಣು ಸಿಸಿಬಿ ಪೊಲೀಸರಿಗೆ ಶರಣಾಗಿದ್ದಾನೆ. ಮಡಿಕೇರಿಯಲ್ಲಿ ಗೀತಾವಿಷ್ಣುವನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ಗೀತಾವಿಷ್ಣು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ 33ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇಂದು ನಡೆಯಲಿದೆ. ಬುಧವಾರ ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು, ಗೀತಾವಿಷ್ಣುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಶರಣಾಗಿದ್ದು ಹೇಗೆ? : ಗೀತಾವಿಷ್ಣು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದ ಬಳಿಕ ಶರಣಾಗಲು ನಿರ್ಧರಿಸಿದರು. ಸ್ನೇಹಿತರ ಮೂಲಕ ಪೊಲೀಸರಿಗೆ ಕರೆ ಮಾಡಿ, ಮಡಿಕೇರಿಯಲ್ಲಿದ್ದೇನೆ, ಶರಣಾಗುತ್ತೇನೆ ಎಂದು ಹೇಳಿದ್ದರು.
ಸಿಸಿಬಿ ಎಸಿಬಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಮಡಿಕೇರಿಗೆ ತೆರಳಿ ಗೀತಾವಿಷ್ಣುವನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ. ಇಂದು ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಗೀತಾವಿಷ್ಣುವನ್ನು ಹಾಜರುಪಡಿಸಲಿದ್ದಾರೆ.
ಸೆ.28ರಂದು ಕುಡಿದ ಮತ್ತಿನಲ್ಲಿ ಗೀತಾವಿಷ್ಣು ಅಪಘಾತ ಮಾಡಿದ್ದ. ಮೊದಲು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದ ಅವರ ಬೆನ್ಜ್ ಎಸ್ಯುವಿ ವಾಹನ ನಂತರ ಸೌತ್ ಎಂಡ್ ಸರ್ಕಲ್ ಬಳಿ ನಾಮಫಲಕಕ್ಕೆ ಡಿಕ್ಕಿ ಹೊಡೆದಿತ್ತು. ವಾಹನದಲ್ಲಿ 110 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು.
ಅಪಘಾತದಲ್ಲಿ ಗಾಯಗೊಂಡಿದ್ದ ಗೀತಾವಿಷ್ಣುವನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೆ.29ರ ಮುಂಜಾನೆ ಮಲ್ಯ ಆಸ್ಪತ್ರೆಯಿಂದ ಗೀತಾವಿಷ್ಣು ಪರಾರಿಯಾಗಿದ್ದ. ಮೊದಲು ಜಯನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ನಂತರ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು.
ಗಡ್ಡ ಬೋಳಿಸಿಕೊಂಡಿದ್ದ : ಗೀತಾವಿಷ್ಣು ಪೊಲೀಸರಿಂದ ತಪ್ಪಿಸಿಕೊಳ್ಳಲು ಗಡ್ಡ ಬೋಳಿಸಿ, ಕಟಿಂಗ್ ಮಾಡಿಸಿಕೊಂಡಿದ್ದ. ಗೀತಾವಿಷ್ಣು ಆಸ್ಪತ್ರೆಯಿಂದ ಪರಾರಿಯಾದ ಬಳಿಕ ಪೊಲೀಸರು ತಮಿಳುನಾಡು, ಹೈದರಾಬಾದ್ ಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದರು.












Click it and Unblock the Notifications