ಎಸ್ಐಟಿಯಿಂದ ಬೆದರಿಸಿ ಹೇಳಿಕೆ ದಾಖಲು: ಗೌರಿ ಹತ್ಯೆ ಆರೋಪಿಗಳ ಅಳಲು
ಬೆಂಗಳೂರು, ಸೆಪ್ಟೆಂಬರ್ 29: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ತಮ್ಮನ್ನು ವಿಶೇಷ ತನಿಖಾ ದಳದ ಪೊಲೀಸರು ಬೆದರಿಸಿ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಅವರನ್ನು ಸಿಟಿ ಸಿವಿಲ್ ಕೋರ್ಟ್ಗೆ ಹಾಜರುಪಡಿಸಲು ಕರೆ ತರುವಾಗ ಮಾಧ್ಯಮಗಳ ಮುಂದೆ ಅವರು ಅಳಲು ತೋಡಿಕೊಂಡಿದ್ದಾರೆ.
'ಒಬ್ಬರು ಹೊಡೀತಾರೆ, ಇನ್ನೊಬ್ಬರು ಹಣ ಕೊಡುತ್ತೇವೆ. ಆರೋಪ ಒಪ್ಪಿಕೊಳ್ಳಿ ಎಂದು ಹೇಳುತ್ತಾರೆ. ಇನ್ನು ಕೆಲವರು ಬೆದರಿಕೆ ಹಾಕುತ್ತಾರೆ' ಎಂದು ಪರಶುರಾಮ್ ವಾಘ್ಮೋರೆ ದೂರಿದ್ದಾನೆ.

ನಮ್ಮ ವಿರುದ್ಧ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಾವು ಅಮಾಯಕರು ಎಂದು ವಾಘ್ಮೋರೆ ಮತ್ತು ನವೀನ್ ಕುಮಾರ್ ಹೇಳಿದ್ದಾರೆ.
'ಎಸ್ಐಟಿ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ. ಅಣ್ಣ ತಮ್ಮಂದಿರನ್ನು ಕೇಸ್ನಲ್ಲಿ ಫಿಟ್ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಖಾಲಿ ಪೇಪರ್ ಮೇಲೆ ಸಹಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮತ್ತೊಬ್ಬ ಆರೋಪಿ ಮನೋಹರ ಯಡವೆ ಹೇಳಿದ್ದಾನೆ.
ಸಿಟಿ ಸಿವಿಲ್ ಕೋರ್ಟ್ಗೆ ಎಲ್ಲ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 12ರವರೆಗೂ ವಿಸ್ತರಿಸಲಾಗಿದೆ.
ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು ಪರಶುರಾಮ್ ವಾಘ್ಮೋರೆಯೇ ಎಂದು ಎಫ್ಎಸ್ಎಲ್ ವರದಿ ಹೇಳಿತ್ತು.
ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಹಾಗೂ ದಾದಾ ಅವರುಗಳ ಸೂಚನೆಯಂತೆ ನಡೆದುಕೊಂಡಿದ್ದ ಪರಶುರಾಮ್ ವಾಘ್ಮೋರೆ ಎಸ್ಐಟಿ ಪೊಲೀಸರಿಗೆ ಎಲ್ಲ ವಿಷಯವನ್ನು ಚಾಚೂ ತಪ್ಪದೆ ಹೇಳಿದ್ದಾನೆ ಎನ್ನಲಾಗಿತ್ತು.
ಎಸ್ಐಟಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ 13 ಮಂದಿಯನ್ನು ಬಂಧಿಸಿದೆ. ಡಾ.ಎಂ.ಎಂ. ಕಲಬುರ್ಗಿ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಂಬೋಲ್ಕರ್ ಅವರ ಹತ್ಯೆ ಪ್ರಕರಣಗಳಲ್ಲಿಯೂ ಈ ಆರೋಪಿಗಳ ಕೈವಾಡ ಇರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಬಂಧಿಸಿದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಆರೋಪಿಗಳು ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ.











Click it and Unblock the Notifications