ಗೌರಿ ಹತ್ಯೆ ತನಿಖೆ ಬಗ್ಗೆ ಕವಿತಾ ಲಂಕೇಶ್ ಅಸಮಾಧಾನ
ಬೆಂಗಳೂರು, ನವೆಂಬರ್ 13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ವಿಶೇಷ ತನಿಖಾ ದಳ ಸಮರ್ಥವಾಗಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ತನಿಖೆ ಪ್ರಗತಿ ಬಗ್ಗೆ ಗೌರಿ ಅವರ ಸೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮ್ಮರ್ ಹಾಲಿಡೇಸ್ ಎಂಬ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕವಿತಾ ಅವರು ತಮ್ಮ ಅಕ್ಕ ಗೌರಿಯನ್ನು ನೆನೆದು ಭಾವುಕರಾದರು.

ಗೃಹಸಚಿವ ರಾಮಲಿಂಗಾರೆಡ್ಡಿ ಅವರು ಎರಡು ತಿಂಗಳಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗಲಿದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ತನಿಖೆಯ ಕುರಿತು ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.
ಮೂವರು ಆರೋಪಿಗಳನ್ನು ಬಂಧಿಸಿರುವ ಕುರಿತು ಮಾಹಿತಿ ಇಲ್ಲ. ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಯ್ತು. ಇದೆಲ್ಲ ನೋಡಿದರೆ, ಗೃಹಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನು ಅನುಮಾನ ಕಾಡ್ತಿದೆ ಎಂದು ಕವಿತಾ ತಮ್ಮ ಅಳಲು ತೋಡಿಕೊಂಡರು.
ಈ ನಡುವೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ಸೋಮವಾರ(ನವೆಂಬರ್ 13) ದಿಂದ ಆರಂಭವಾಗಿದ್ದು, ಪತ್ರಕರ್ತೆ ಗೌರಿ ಲಂಕೇಶ್, ಡಿವೈಎಸ್ಪಿ ಗಣಪತಿ ಪ್ರಕರಣಗಳು ಸದ್ದು ಮಾಡಿವೆ.
ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಿ, ಎಸ್ ಐಟಿ ತನಿಖೆಯನ್ನು ಸಮರ್ಥಿಸಿಕೊಂಡರು. ಹಂತಕರನ್ನು ಪತ್ತೆಹಚ್ಚಲು ವಿಶೇಷ ತನಿಖಾ ದಳವನ್ನು ಈಗಾಗಲೇ ರಚಿಸಲಾಗಿದ್ದು, ಹಂತಕರ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದರು.












Click it and Unblock the Notifications