ರೌಡಿ ಲಕ್ಷ್ಮಣ ಕೊಲೆ : ಪೋಷಕರಿಗೆ ಆರೋಪಿ ವರ್ಷಿಣಿ ಭಾವುಕ ಪತ್ರ
ಬೆಂಗಳೂರು, ಜೂನ್ 09 : ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ವರ್ಷಿಣಿ ಪೋಷಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕೋಕಾ ಕಾಯ್ದೆಯಡಿ ಬಂಧನವಾಗಿರುವ ವರ್ಷಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಬೆಂಗಳೂರು ನಗರದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ 21 ವರ್ಷದ ವರ್ಷಿಣಿ ಪ್ರಮುಖ ಆರೋಪಿ. ಸಿಸಿಬಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಏಳಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಜೈಲಿನಿಂದಲೇ ವರ್ಷಿಣಿ ಪೋಷಕರಿಗೆ ಪತ್ರವೊಂದನ್ನು ಬರೆದಿದ್ದಾಳೆ.

ಜೂನ್ 4ರಂದು ವರ್ಷಿಣಿ ಹುಟ್ಟು ಹಬ್ಬ. ಜೈಲು ವಾಸ ಅನುಭವಿಸುತ್ತಿರುವ ಅವರು ತಮ್ಮ ತಪ್ಪಿನ ಅರಿವಾಗಿ ಪೋಷಕರಿಗೆ ಪತ್ರವನ್ನು ಬರೆದಿದ್ದಾರೆ. 'ಜೈಲಿನಲ್ಲಿ ಇರುವುದಕ್ಕೆ ರೋದನೆ ಆಗುತ್ತಿದೆ. ನನಗೆ ಮನಃಶಾಂತಿ ಬೇಕು' ಎಂದು ಪತ್ರದಲ್ಲಿ ಹೇಳಿದ್ದಾರೆ.
ಪತ್ರದಲ್ಲಿ ಏನಿದೆ? : ವರ್ಷಿಣಿ ಬರೆದಿರುವ ಪತ್ರದಲ್ಲಿ, 'ಐ ಲವ್ ಯೂ ಅಪ್ಪ, ಅಮ್ಮ. Sorry..Sorry....ನೀವು ಹೇಗಿದ್ದೀರಾ?. ನನಗೆ ಜೈಲಿನಲ್ಲಿ ಇರುವುದಕ್ಕೆ ಹಿಂಸೆಯಾಗುತ್ತಿದೆ. ಅಪ್ಪ-ಅಮ್ಮ ನೀವೆಲ್ಲರೂ ತುಂಬಾ ಒಳ್ಳೆಯವರು. ನಾನು ಕೆಟ್ಟವಳು, ಕೆಟ್ಟ ಹುಡುಗಿ. ನನ್ನಿಂದ ನಿಮಗೆ ತುಂಬಾ ತೊಂದರೆ ಆಗಿದೆ. ನನ್ನನ್ನು ಜೈಲಿನಿಂದ ಕರೆದುಕೊಂಡು ಹೋಗಿ. ಜೈಲಿನಲ್ಲಿ ಇರುವುದಕ್ಕೆ ನನಗೆ ರೋದನೆ ಆಗುತ್ತಿದೆ' ಎಂದು ಪತ್ರ ಬರೆದಿದ್ದಾರೆ.
ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ವರ್ಷಿಣಿಯನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿದೆ. ಈ ಕಾಯ್ದೆಯಡಿ ಬಂಧನವಾದರೆ ಜಾಮೀನು ಸಿಗಲು ವರ್ಷಗಳು ಬೇಕಾಗುತ್ತದೆ. ಆದ್ದರಿಂದ, ವರ್ಷಿಣಿಗೆ ಸದ್ಯಕ್ಕಂತೂ ಜಾಮೀನು ಸಿಗುವುದಿಲ್ಲ.
2019ರ ಮಾರ್ಚ್ 7ರಂದು ರೌಡಿ ಶೀಟರ್ ಲಕ್ಷ್ಮಣನನ್ನು ಕೊಲೆ ಮಾಡಲಾಗಿತ್ತು. ಬೆಂಗಳೂರಿನ ಇಸ್ಕಾನ್ ದೇವಾಲಯದ ಬಳಿ ಹಾಡಹಗಲೇ 12 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿತ್ತು.












Click it and Unblock the Notifications