Ganesh Chaturthi 2023: ಬೆಂಗ್ಳೂರಿನಲ್ಲಿ ಗಣೇಶ ವಿಸರ್ಜನೆಗೆ BBMP ತಯಾರಿ ಹೀಗಿದೆ, ವಿವರ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್, 17: ರಾಜಾಧಾನಿ ಬೆಂಗಳೂರಿನಲ್ಲಿ ಗೌರಿ - ಗಣೇಶನ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಗಣೇಶ ವಿಸರ್ಜನೆಗೆ ಬೇಕಾದ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ. ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗೌರಿ - ಗಣೇಶನ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಗೌರಿ - ಗಣೇಶನ ಮೂರ್ತಿಗಳಿಂದ ಸಿಲಿಕಾನ್ ಸಿಟಿ ಕಂಗೋಳಿಸುತ್ತಿದೆ. ಈ ಮಧ್ಯೆ ಬಿಬಿಎಂಪಿ ಗಣೇಶ ಮೂರ್ತಿ ವಿಸರ್ಜನೆಗೆ ಸಕಲ ತಯಾರಿ ಮಾಡಿಕೊಂಡಿದೆ.
ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ ತಾತ್ಕಾಲಿಕ ಸಂಚಾರಿ ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಿದೆ. 5 ಇಂಚಿನಿಂದ 3 ಅಡಿ ಎತ್ತರದ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜಿಸಲು ತಯಾರಿ ಮಾಡುತ್ತಿದೆ. ದೊಡ್ಡ ಮೂರ್ತಿಗಳ ವಿಸರ್ಜನೆ ಮಾಡಲು ಒಟ್ಟು 12 ತಾತ್ಕಾಲಿಕ ಕಲ್ಯಾಣಿಗಳನ್ನು ವ್ಯವಸ್ಥೆ ಮಾಡಿದೆ.

ಗಣೇಶ ಚತುರ್ಥಿಗೆ ಕೌಂಟ್ ಡೌನ್ ಆರಂಭವಾಗಿದೆ. ಗಣೇಶನ ವಿಸರ್ಜನೆಗೆ ಬಿಬಿಎಂಪಿಯಿಂದ ಸಿದ್ಧತೆ ನಡೆಸಿದ್ದು, ನಗರ 12 ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಅದರಲ್ಲಿ ನಗರದ ಯಡಿಯೂರು, ಹೆಬ್ಬಾಳ, ಸ್ಯಾಂಕಿಟ್ಯಾಂಕಿ ಕೆರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ವಿರ್ಸಜರ್ನೆಗೆ ಜನರು ಬರುವ ಸಾಧ್ಯಾತೆ ಇದ್ದು, ಸಧ್ಯ ಕಲ್ಯಾಣಿಗಳಲ್ಲಿ ಹೊಳೆತ್ತಿ, ಬಣ್ಣ ಬಳಿಯಲಾಗಿದೆ. ಅದರಲ್ಲೂ ನಗರದ ಯಡಿಯೂರು ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿರ್ಜನೆ ಮಾಡಲು ಸಾಧ್ಯತೆ ಇರುವುದರಿಂದ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಗಣೇಶ ವಿಸರ್ಜನೆಗೆ ಒಂದೊಂದು ಕಲ್ಯಾಣಿಗೆ 80 ಈಜುಗಾರರನ್ನು ನೇಮಿಸಿದ್ದು,ಕಲ್ಯಾಣಿ ಸುತ್ತಲೂ ಸಿಸಿಟಿವಿ ಕ್ಯಾಮೆರ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹೈಟೆಕ್ ಲೈಟಿಂಗ್ ವ್ಯಾವಸ್ಥೆ ಇರಲಿದ್ದು, ಜನರಿಗೆ ಸಮಸ್ಯೆಯಾಗದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಲ್ಯಾಣಿಯಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಬಿಡಲು ಮಾತ್ರ ಅವಕಾಶ ಕಲ್ಪಿಸಿದ್ದು, ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧ ಮಾಡಲಾಗಿದೆ.
ಒಟ್ಟು 15 ದಿನಗಳ ಕಾಲ ಗಣೇಶ ವಿಸರ್ಜನೆಗೆ ನಿಗದಿ ಮಾಡಿದ್ದು, ಮೊದಲ ಮೂರು ದಿನಗಳ 12 ಗಂಟೆಗಳ ಕಾಲ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಟ್ರಾಫಿಕ್ ಸಮಸ್ಯೆಯಾಗಬಾರದು ಎನ್ನುವ ನಿಟ್ಟಿನಿಂದ 150 ಜನ ಟ್ರಾಫಿಕ್ ಪೋಲಿಸರು ಇರಲಿದ್ದಾರಂತೆ.
ಅಲ್ಲದೇ ಸ್ವಯಂ ಸೇವಕರು 200 ಜನರು ಇರಲಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಂದಹಾಗೇ ಕಳೆದ ವರ್ಷ ಒಂದು ಲಕ್ಷದ 65 ಸಾವಿರ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿತ್ತು. ಈ ಈ ಬಾರಿ 2 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಗೆ ಬರುವ ಸಾಧ್ಯಾತೆ ಇದ್ದು, ಬೆಳ್ಳಗೆ 10 ಗಂಟೆಯಿಂದ 12 ಗಂಟೆಯವರೆಗೂ ಕಲ್ಯಾಣಿಯ ಸುತ್ತ - ಮುತ್ತ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು, ಈ ಕುರಿತಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿ ನಾಥ್ ಅವರು ಮಾತನಾಡಿ, ರಾಜಾಧಾನಿಯ ಎಲ್ಲಾ ಕಡೆ ಸಿದ್ದತೆಯಾಗಿದೆ. ಪಿಒಪಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಇಲ್ಲ. ಲೈಟಿಂಗ್ ಎಲ್ಲಾ ಕಡೆ ಅಳವಡಿಸಲಾಗಿದೆ. ಟೆಂಡರ್ ಕರೆದು ಮಾಡಿರುವುದರಿಂದ ಈ ಬಾರಿ ಸಮಸ್ಯೆಯಾಗುವುದಿಲ್ಲ ಅಂತ ಹೇಳಿದರು. ಒಟ್ಟಿನಲ್ಲಿ, ಗಣೇಶನ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಇದೇ ಸೆಪ್ಟೆಂಬರ್ 18 ರಂದು ಗಣೇಶನ ಹಬ್ಬಕ್ಕೆ ಬೆಂಗಳೂರು ಸಾಕ್ಷಿಯಾಗಲಿದ್ದು, ಗಣೇಶನ ಉತ್ಸವ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.












Click it and Unblock the Notifications