ಪ್ರೀತಿ ಕೊಟ್ಟ ತಾಯಿ ಸುಷ್ಮಾ ಅಗಲಿಕೆ ನೋವಲ್ಲಿ ಗಾಲಿ ರೆಡ್ಡಿ ಕಣ್ಣೀರು
Recommended Video
ಬೆಂಗಳೂರು, ಆಗಸ್ಟ್ 07: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್(67) ಅವರು ಮಂಗಳವಾರ ರಾತ್ರಿ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿ ಕರ್ನಾಟಕದ ರಾಜಕೀಯ ಮುಖಂಡರು, ಗಣ್ಯಾತಿಗಣ್ಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ತಮಗೆ ರಾಜಕೀಯ ಜನ್ಮ ನೀಡಿ, ಪ್ರೀತಿ ತೋರಿದ ಸುಷ್ಮಾ ಅಗಲಿಕೆಯ ನೋವಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಕಣ್ಣೀರಿಟ್ಟಿದ್ದಾರೆ.
"ನಮಗೆ ಜನ್ಮ ಕೊಟ್ಟ ತಾಯಿಯಂತೆ ನಮಗೆ ಪ್ರೀತಿ ಕೊಟ್ಟ ತಾಯಿ ಸುಷ್ಮಾ ತಾಯಿ, 13 ವರ್ಷಗಳ ನಮ್ಮ ಕುಟುಂಬದ ಜೊತೆಗೆ ಒಡನಾಟ, ಈ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅವರಲ್ಲಿ ಮೋಸ, ಸುಳ್ಳು ಇರಲಿಲ್ಲ, ಅವರಿಂದ ನಾವು ಕಲಿಯುವುದು ಸಾಕಷ್ಟಿತ್ತು." ಎಂದು ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭದ್ರನೆಲೆಗೆ ಬುನಾದಿ ಹಾಕಿದ ಸುಷ್ಮಾ ಸ್ವರಾಜ್ ಅವರು ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಬದುಕು ಆರಂಭಕ್ಕೂ ಕಾರಣರಾದವರು. ಬಳ್ಳಾರಿ ಜನತೆ ಜೊತೆ ಆತ್ಮೀಯ ನಂಟು ಹೊಂದಿದ್ದ ಸುಷ್ಮಾ ಅವರ ಜೊತೆಗಿನ ಬಾಂಧವ್ಯದ ಬಗ್ಗೆ ಗಾಲಿ ರೆಡ್ಡಿ ಮಾತನಾಡಿದ್ದಾರೆ.

ಚುನಾವಣೆ ಸೋತ ಬಳಿಕ ಹೆಲಿಕಾಪ್ಟರ್ ಹತ್ತುವ ವೇಳೆ
ಚುನಾವಣೆ ಸೋತ ಬಳಿಕ ಹೆಲಿಕಾಪ್ಟರ್ ಹತ್ತುವ ವೇಳೆ ನಾವು ಇಬ್ಬರು(ಶ್ರೀರಾಮುಲು) ಅಳುತ್ತಾ ನಿಂತಿದ್ದೆವು, ಹೆಲಿಕಾಪ್ಟರ್ ನಿಂದ ಇಳಿದು ಬಂದು ನಮ್ಮನ್ನು ಅಪ್ಪಿ, ಸೋಲು ಗೆಲುವು ಸಾಮಾನ್ಯ, ಬಳ್ಳಾರಿ ಜನರು ಕೊಟ್ಟಿರುವ ಪ್ರೀತಿ ನಾನು ಮರೆಯುವುದಿಲ್ಲ, ನೀವು ಹಬ್ಬದ ಸಂದರ್ಭದಲ್ಲಿ ಕೊಟ್ಟಿರುವ ಅರಿಶಿನ ಕುಂಕುಮವನ್ನು ಕಾಯ್ದುಕೊಳ್ಳುತ್ತೇನೆ, ಪ್ರತಿ ವರ್ಷ ಬಂದು ಹೋಗುತ್ತೇನೆ ಎಂದು ಮಾತು ಕೊಟ್ಟರು. 13 ವರ್ಷ ಬಂದು ನಮ್ಮ ಜೊತೆ ಪೂಜೆಯಲ್ಲಿ ಪಾಲ್ಗೊಂಡರು.

ನನ್ನ ರಾಜಕೀಯ ಬದುಕಿಗೆ ಓಂಕಾರ ಹಾಕಿದರು
"ನಾನು ರಾಜಕೀಯ ಜೀವನಕ್ಕೆ ಬಂದಿದ್ದೆ ಅವರಿಂದ, ಶ್ರೀರಾಮುಲು ಜೊತೆಗಿದ್ದು ರಾಜ್ಯಮಟ್ಟದಲ್ಲಿ ರಾಜಕೀಯವಾಗಿ ಬೆಳೆಯುವಂತೆ ಸೂಚಿಸಿದರು. ನಾನು ನನ್ನ ವ್ಯಾಪಾರ, ಸೂಟು ಬೂಟು ಆಫೀಸ್ ವ್ಯವಹಾರ ಬಿಟ್ಟು ಶ್ರೀರಾಮುಲು ಜೊತೆಗೆ ರಾಜಕೀಯದಲ್ಲಿ ತೊಡಗಿಕೊಂಡೆ.
"ನಮಗೆ ಅಧಿಕಾರ ಇರಲಿ, ಇಲ್ಲದಿದರಲಿ, ನಾನು ಬಂಧನವಾಗುವ ತನಕ ಬಂದಿದ್ದರು, ನನ್ನ ಮಕ್ಕಳಿಗೆ ಸುಷ್ಮಾ ತಾಯಿ ಎಂದರೆ ತುಂಬಾ ಪ್ರೀತಿ"
"2011ರಲ್ಲಿ ಬಂಧನಕ್ಕೂ ಒಂದು ತಿಂಗಳು ಮುಂಚೆ ಭೇಟಿ ಮಾಡಿ ಮಾತನಾಡಿದೆ. ಒಬ್ಬ ತಾಯಿ ಮಗುವನ್ನು ಹೇಗೆ ರಕ್ಷಣೆ ಮಾಡಬಹುದು ಎಂಬುದು.... ಈಗ ನೆನೆಸಿಕೊಂಡರೆ ದುಃಖವಾಗುತ್ತದೆ" ಎಂದರು.

1999ರ ಚುನಾವಣಾ ಪ್ರಚಾರದ ನೆನಪು
"500 ಗ್ರಾಮಗಳಲ್ಲಿ ಸಭೆ ಮಾಡಿ, ಭಾರತದ ಮಣ್ಣಿನ ಮಗಳಿಗೆ ಮತ ಹಾಕಿ, ದೇಶ ಭಕ್ತಿ ಉಳಿಸಿರಿ" ಕರೆ ನೀಡಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ನಿದ್ದೆ ಮಾಡುತ್ತಿರಲಿಲ್ಲ, 10 ದಿನಗಳಲ್ಲಿ ಕನ್ನಡ ಕಲಿತು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಮಕ್ಕಳಿರಲಿ ಹಿರಿಯರಿರಲಿ ಎಲ್ಲರಿಗೂ ಗೌರವ ನೀಡಿ ಮಾತನಾಡಿಸುತ್ತಿದ್ದರು ಎಂದು1999ರ ಚುನಾವಣಾ ಪ್ರಚಾರದ ನೆನಪು ಮಾಡಿಕೊಂಡ ರೆಡ್ಡಿ, ಜನ ಸಂಪರ್ಕ ಹೊಂದುವುದು ಹೇಗೆ, ಪಕ್ಷ ಸಂಘಟನೆ ಹೇಗೆ, ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು ಎಂದು ವಿವರಿಸಿದರು.

ಬಳ್ಳಾರಿ ಜನ ಬಿಜೆಪಿಯತ್ತ ತಿರುಗಿ ನೋಡುವಂತಾಯಿತು
ಅಂದು ಬಿಜೆಪಿಗೆ ಮೊದಲ ಬಾರಿಗೆ ಶೇ.44.7ಕ್ಕೂ ಹೆಚ್ಚಿನ ಮತ ದೊರೆತಿತ್ತು. ಆಗ ಚುನಾವಣಾ ಭಾಷಣದ ಸಂದರ್ಭದಲ್ಲಿ "ನಾನು ನಿಮ್ಮ ಸೊಸೆ ನನ್ನನ್ನು ಆಶೀರ್ವದಿಸಿ" ಎಂದು ಜನರಲ್ಲಿ ಕೇಳಿಕೊಂಡಿದ್ದರು. ಆದರೆ, ಜನ ಗೆಲ್ಲಿಸಲಿಲ್ಲ ಎನ್ನುವ ಕಾರಣಕ್ಕೆ ಬಳ್ಳಾರಿಯನ್ನು ಅವರು ಮರೆಯಲಿಲ್ಲ.
ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಿದ್ದರೆ ಅದಕ್ಕೆ ಸುಷ್ಮಾ ಸ್ವರಾಜ್ ಪ್ರಮುಖ ಕಾರಣವಾಗಿದ್ದಾರೆ ಎಂದರೆ ತಪ್ಪಲ್ಲ.












Click it and Unblock the Notifications