ನನ್ನ 'ಪಾರಿಜಾತ' ಜಪ್ತಿಯಾಗಿಲ್ಲ, ಮನೆ ಮಾರಾಟಕ್ಕಿಲ್ಲ : ಗಾಲಿ ರೆಡ್ಡಿ
ಬೆಂಗಳೂರು, ಫೆಬ್ರವರಿ 12: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬೆಂಗಳೂರಿನ ನಿವಾಸ ಮಾರಾಟಕ್ಕಿಡಲಾಗಿದೆ ಎಂಬ ಸುದ್ದಿ ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ, ಈ ಬಗ್ಗೆ ಗಾಲಿ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಅಂಬಿಡೇಟ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿರುವ ಜನಾದರ್ನ ರೆಡ್ಡಿ ಅವರ 'ಪಾರಿಜಾತ' ನಿವಾಸವನ್ನು ಕಂದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಮನೆಯನ್ನು ಮಾರಾಟಕ್ಕೆ ಇಡಲಾಗಿದ್ದು, 15 ದಿನಗಳಲ್ಲಿ ಹರಾಜು ಹಾಕುವ ಸಾಧ್ಯತೆಯಿದೆ ಎಂದು ಸುದ್ದಿ ವಾಹಿನಿಗಳಲ್ಲಿ ಬಂದ ವರದಿಗಳನ್ನು ಗಾಲಿ ಜನಾರ್ದನ ರೆಡ್ಡಿ ಅವರು ಅಲ್ಲಗೆಳೆದಿದ್ದಾರೆ.
ಮನಸ್ಸಿಗೆ ನೋವಾಗಿದೆ: ನನ್ನ ಮನೆ ಮಾರಾಟಕ್ಕಿಲ್ಲ, ನನ್ನ ಮನೆಯನ್ನು ಯಾರೂ ಜಪ್ತಿ ಮಾಡಿಲ್ಲ. ಮಾಧ್ಯಾಮಗಳಲ್ಲಿ ಬಂದಿರುವ ಸುದ್ದಿ ನೋಡಿ ನೋವಾಗಿದೆ. ಈ ಬಗ್ಗೆ ನನ್ನ ಪ್ರತಿಕ್ರಿಯೆ ಪಡೆಯದೆ ಸುದ್ದಿ ಮಾಡಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಅವರು ಆರೋಪಿಗಳಾಗಿದ್ದಾರೆ.
ಜನಾರ್ದನ ರೆಡ್ಡಿ ಅವರು ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ. ಸಿಸಿಬಿ ಪೊಲೀಸರು ವಂಚನೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ರೆಡ್ಡಿ ಆಪ್ತರಾದ ಅಲಿಖಾನ್ ಅವರು ಸಹ ಈ ಪ್ರಕರಣದಲ್ಲಿ ಆರೋಪಿ.ಮುಂದಿನ ಆದೇಶದ ತನಕ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ. ಅಂಬಿಡೆಂಟ್ ಪ್ರಕರಣದಲ್ಲಿ ಅಲಿಖಾನ್ ಅವರು 4ನೇ ಆರೋಪಿ. ಸಿಸಿಬಿ ಪೊಲೀಸರು ಅಲಿಖಾನ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications