ಡಿಸೆಂಬರ್ 20ರಿಂದ ಬೆಳಗ್ಗೆ 5ಗಂಟೆಗೆ ನಮ್ಮ ಮೆಟ್ರೋ ಸಂಚಾರ
ಬೆಂಗಳೂರು, ಡಿಸೆಂಬರ್ 19; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಮ್ಮ ಮೆಟ್ರೋ ರೈಲು ಸಂಚಾರ ಅವಧಿಯಲ್ಲಿ ಬದಲಾವಣೆ ಮಾಡಿದೆ. ಡಿಸೆಂಬರ್ 20ರಿಂದ ಸೋಮವಾರದಿಂದ ಶನಿವಾರದ ತನಕ ಈ ನೂತನ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.
ಬಿಎಂಆರ್ಸಿಎಲ್ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಡಿಸೆಂಬರ್ 20ರ ಸೋಮವಾರದಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನ ಈ ಬದಲಾವಣೆ ಅನ್ವಯವಾಗಲಿದೆ ಎಂದು ಹೇಳಿದೆ.
ನೂತನ ವೇಳಾಪಟ್ಟಿ ಪ್ರಕಾರ ಸೋಮವಾರದಿಂದ ಶನಿವಾರದ ತನಕ ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಅಂದರೆ ಬೆಳಗ್ಗೆ 5 ಗಂಟೆಗೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

ವಾರದ ದಿನಗಳಲ್ಲಿ (ಸೋಮವಾರದಿಂದ ಶನಿವಾರ) ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲ ಮೆಟ್ರೋ ರೈಲು ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭಿಸಲಿದೆ. ಭಾನುವಾರದಂದು ಮಾತ್ರ ಯಾವ ಬದಲಾವಣೆ ಇರುವುದಿಲ್ಲ ಬೆಳಗ್ಗೆ 7 ಗಂಟೆಗೆ ರೈಲು ಸೇವೆ ಪ್ರಾರಂಭವಾಗುತ್ತದೆ.
ವಾರದ ಎಲ್ಲಾ ದಿನಗಳು ಎಲ್ಲಾ ಟರ್ಮಿನಲ್ಗಳಿಂದ ರಾತ್ರಿ 23.00 (11 ಗಂಟೆ)ಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ನಿಂದ 23.30 (11.30)ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಪರಿಸ್ಥಿತಿಗೂ ಮೊದಲು; ಕೋವಿಡ್ ಪರಿಸ್ಥಿತಿಗೂ ಮೊದಲು ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯ ತನಕ ನಮ್ಮ ಮಟ್ರೋ ಸಂಚಾರ ನಡೆಸುತ್ತಿತ್ತು. ಲಾಕ್ಡೌನ್ ಸಂದರ್ಭದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಮೆಟ್ರೋ ಸಂಚಾರ ಆರಂಭವಾದ ಬಳಿಕ ಬೆಳಗ್ಗೆ 7 ರಿಂದ ರಾತ್ರಿ 8ರ ತನಕ ಮಾತ್ರ ರೈಲು ಸಂಚಾರ ನಡೆಸುತ್ತಿತ್ತು.
ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಬಳಿಕ ಮುಂಜಾನೆ 6 ರಿಂದ ರಾತ್ರಿ 10ರ ತನಕ ಸಂಚಾರ ಆರಂಭವಾಯಿತು. ಆದರೆ ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿದ ಬಳಿಕ ಮೆಟ್ರೋ ರೈಲು ಸೇವೆಯ ಸಮಯ ವಿಸ್ತರಣೆಯಾಗಲಿಲ್ಲ.
ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ತನಕ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು ನವೆಂಬರ್ 6ರಂದು ವಾಪಸ್ ಪಡೆದು ಆದೇಶ ಹೊರಡಿಸಿತ್ತು. ಆದ್ದರಿಂದ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಯಿತು.
ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 6 ರಿಂದ ಮತ್ತು ಭಾನುವಾರ ಬೆಳಗ್ಗೆ 7ರಿಂದ ಮೆಟ್ರೋ ರೈಲಿನ ಸಂಚಾರ ಆರಂಭ ಮಾಡಲಾಯಿತು. ಈಗ ಪುನಃ ಕೋವಿಡ್ ಪೂರ್ವ ಪರಿಸ್ಥಿತಿಯಂತೆ ಬೆಳಗ್ಗೆ 5 ಗಂಟೆಗೆ ಮೆಟ್ರೋ ಸಂಚಾರ ಆರಂಭಿಸಲಿದೆ.
ಮುಂಜಾನೆ ಮೆಟ್ರೋ ಸಂಚಾರ ನಡೆಸುವುದಿರಿಂದ ಬೇರೆ-ಬೇರೆ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಜನರಿಗೆ ಸಹಾಯಕವಾಗಲಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧ ನಿಲ್ದಾಣಗಳಿಂದ ಜನರು ಮುಂಜಾನೆಯೇ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.
ಮೆಟ್ರೋ ಸಂಚಾರ; ಪ್ರಸ್ತುತ ಹಸಿರು ಮಾರ್ಗದಲ್ಲಿ ನಾಗಸಂದ್ರ-ರೇಷ್ಮೆ ಸಂಸ್ಥೆ, ನೇರಳೆ ಮಾರ್ಗದಲ್ಲಿ ಕೆಂಗೇರಿ-ಬೈಯಪ್ಪನಹಳ್ಳಿ ತನಕ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಕೋವಿಡ್ ಪರಿಸ್ಥಿತಿ ಬಳಿಕ ಮೆಟ್ರೋದಲ್ಲಿ ಪ್ರತಿನಿತ್ಯ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯೂ ಕುಸಿತವಾಗಿದೆ. ಆದ್ದರಿಂದ ಬಿಎಂಆರ್ಸಿಎಲ್ ಒಂದು ಗಂಟೆ ಮೊದಲೇ ರೈಲು ಸಂಚಾರ ಆರಂಭಿಸುತ್ತಿದೆ.
ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಸೇರಿ ರೈಲು 42 ಕಿ. ಮೀ. ಸಂಚಾರ ನಡೆಸುವಾಗ ಪ್ರತಿದಿನ ಸುಮಾರು 4 ಲಕ್ಷ ಜನರು ಸಂಚಾರ ಮಾಡುತ್ತಿದ್ದರು. ಈಗ ಒಟ್ಟು 56 ಕಿ. ಮೀ.ಗೆ ಮಾರ್ಗ ವಿಸ್ತರಣೆಯಾಗಿದೆ. ಆದರೆ ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ 3 ಲಕ್ಷದ ಗಡಿ ದಾಟುತ್ತಿಲ್ಲ.
ಬಿಎಂಆರ್ಸಿಎಲ್ 2019-20ರಲ್ಲಿ ಪ್ರತಿದಿನ 15 ಲಕ್ಷ ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಿತ್ತು. ಆದರೆ ಶೇ 27ರಷ್ಟು ಗುರಿಯನ್ನು ಮಾತ್ರ ತಲುಪಿತ್ತು. ಇನ್ನೂ ಹಲವು ಕಚೇರಿಗಳು ಬಾಗಿಲು ತೆರದಿಲ್ಲ. ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಕಂಪನಿಗಳು ನೀಡಿವೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications