ಸಿಟಿ ರೈಲು ನಿಲ್ದಾಣದ ಬಳಿ ಪಾದಚಾರಿ ಸೇತುವೆ ಶೀಘ್ರ ಬಳಕೆಗೆ
ಬೆಂಗಳೂರು, ಜು.4: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣದ ನಡುವಿನ ಪಾದಚಾರಿ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.
ಸಿಟಿ ರೈಲು ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೇ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಭಾರತೀಯ ರೈಲ್ವೆ ಇಲಾಖೆ ಹಾಗೂ ಬಿಎಂಆರ್ಸಿಎಲ್ ನಡುವೆ ಸಮನ್ವಯ ಕೊರತೆಯಿಂದ ಹಾಗೂ ತಾಂತ್ರಿಕ ಅಡಚಣೆಯಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು.
ಮೆಟ್ರೋ ಆರು ಬೋಗಿ ರೈಲಿನ ಸೇವೆ ಆರಂಭವಾದರೂ ಒಂದು ಸಾರಿಗೆಯಿಂದ ಮತ್ತೊಂದು ಸಾರಿಗೆಯ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ. ಜೂನ್ನಲ್ಲೇ ಸೇತುವೆ ಉದ್ಘಾಟನೆಗೊಳ್ಳಬೇಕಿತ್ತು.

ಆದರೆ ಮೆಟ್ಟಿಲಿನ ಕಾಮಗಾರಿ ಬಾಕಿಯಾಗಿದ್ದರಿಂದ ಉದ್ಘಾಟನೆ ಸಾಧ್ಯವಾಗಿಲ್ಲ , ಈ ಕಾಮಗಾರಿಯನ್ನು ಬೇಗನೆ ಮುಗಿಸಿ ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ನಲ್ಲಿ ಜನಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.
ಮೆಟ್ರೋ ನಿಲ್ದಾಣದಿಂದ ಹೊರ ಬಂದು ಕೆಎಸ್ಆರ್ ನಿಲ್ದಾಣ ತಲುಪಲು 450 ಮೀಟರ್ ಉದ್ದದ ಕಚ್ಛಾರಸ್ತೆಯಲ್ಲಿ ನಡೆಯಬೇಕು.
ಅಲ್ಲಿ ಮೆಟ್ಟಿಲು ಹತ್ತಿ ಕೆಎಸ್ಆರ್ ರೈಲು ನಿಲ್ದಾಣದ ಸ್ಕೈವಾಕ್ ಏರಬೇಕು. ಈ ಸ್ಕೈವಾಕ್ ಪ್ಲಾಟ್ಫಾರಂ 10ಕ್ಕೆ ಸಂಪರ್ಕ ಕಲ್ಪಿಸುತ್ತದೆ. 250 ಮೀಟರ್ ಉದ್ದದ ಸೇತುವೆ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ.












Click it and Unblock the Notifications