ದಟ್ಟ ಮಂಜು : ಬೆಂಗಳೂರು ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಡಿಸೆಂಬರ್ 26 : ದಟ್ಟ ಮಂಜು ಕವಿದ ಹಿನ್ನೆಲೆ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿವಿಧ ದೇಶಗಳು ಹಾಗೂ ವಿವಿಧ ರಾಜ್ಯಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಸುಮಾರು 2 ರಿಂದ 3 ಗಂಟೆಗಳ ಕಾಲ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6 ಗಂಟೆಯಿಂದ ಯಾವುದೇ ವಿಮಾನಗಳು ಬೆಂಗಳೂರಿನಿಂದ ಸಂಚಾರ ನಡೆಸಿಲ್ಲ.
ಪ್ರಯಾಣಿಕರು 8.30 ರಿಂದ 9 ಗಂಟೆಯವರೆಗೆ ಅನಿವಾರ್ಯವಾಗಿ ಕಾಯಲೇ ಬೇಕು. ಇದೇ ರೀತಿ ಮೋಡದ ವಾತಾವರಣ ಮುಂದುವರೆದರೆ ಪ್ರತಿನಿತ್ಯ ಇದೇ ರೀತಿ ಆಗಬಹುದು ಎಂದು ಕೆಐಎಎಲ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ 27 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, 16 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಇನ್ನು 48 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಬಾಗಲಕೋಟೆಯಲ್ಲಿ 10 ಡಿಗ್ರಿ ಸೆ.ಕನಿಷ್ಟ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ಚಳಿಗಾಲ ಆರಂಭವಾದ ನಂತರ ಇದು ಎರಡನೇ ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋಡ ಕವಿದ ಕಾರಣದಿಂದ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೇವಲ 100 ಮೀಟರ್ ದೂರದಷ್ಟು ವಿಜಿಬಿಲಿಟಿ ಇದ್ದು, ಬೆಳಗ್ಗೆ 8.30 ರ ನಂತರ ವಿಮಾನ ಹಾರಾಟ ಪುನರಾರಂಭ ಗೊಳ್ಳಲಿದೆ ಎಂದು ಕೆಐಎಎಲ್ ಮೂಲಗಳು ತಿಳಿಸಿವೆ.












Click it and Unblock the Notifications