ಬೆಂಗಳೂರಲ್ಲಿ ಬೌನ್ಸ್ ಬೈಕ್ಗೆ ಬೆಂಕಿ; ಪ್ರಕರಣಕ್ಕೆ ತಿರುವು!
ಬೆಂಗಳೂರು, ಜನವರಿ 22 : ಬೆಂಗಳೂರು ನಗರದಲ್ಲಿ ಬೌನ್ಸ್ ಬೈಕ್ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಬೌನ್ಸ್ನಲ್ಲಿ ಉದ್ಯೋಗ ಮಾಡುತ್ತಿದ್ದ ಇಬ್ಬರು ಬೈಕ್ಗಳಿಗೆ ಬೆಂಕಿ ಹಚ್ಚಿದ್ದು, ಕಂಪನಿ ಅವರ ವಿರುದ್ಧ ದೂರು ನೀಡಿದೆ.
ಬೌನ್ಸ್ ಕಂಪನಿ ಮ್ಯಾನೇಜರ್ ಕೆ. ಆರ್. ಪುರ ಠಾಣೆಗೆ ಚಂದ್ರೇಗೌಡ, ಯೋಗೀಶ್, ಸತೀಶ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದ ದಾಖಲಾಗುತ್ತಿದ್ದಂತೆ ಎಲ್ಲಾ ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
2019ರ ನವೆಂಬರ್ 26ರಂದು ಮೂವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅವರು ಡಿಸೆಂಬರ್ 1ರಂದು ಕೆ. ಆರ್. ಪುರದ ಆಲ್ಫಾ ಗಾರ್ಡನ್ನಲ್ಲಿ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು.
ಬೆಂಗಳೂರು ನಗರದಲ್ಲಿ ಬೌನ್ಸ್ ಬೈಕ್ಗಳ ಬ್ಯಾಟರಿ, ಪೆಟ್ರೋಲ್, ಟೈರ್ ಕಳವು ಸೇರಿದಂತೆ ವಿವಿಧ ಪ್ರಕರಣಗಳು ನಡೆದಿವೆ. ಈಗ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೆಟ್ರೋಲ್ ಕದಿಯುತ್ತಿದ್ದರು
ಬೌನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರೇಗೌಡ, ಯೋಗೀಶ್, ಸತೀಶ್ ಕುಮಾರ್ ಇಂಧನ ಕದಿಯುತ್ತಿದ್ದರು ಎಂಬ ಆರೋಪವಿತ್ತು. ಕಂಪನಿ ಆಂತರಿಕ ತನಿಖೆ ನಡೆಸಿದಾಗ ಇದು ಸಾಬೀತಾಗಿತ್ತು. ಅವರು ಸಹ ತಪ್ಪೊಪ್ಪಿಕೊಂಡಿದ್ದರು. ಆದ್ದರಿಂದ, ಕೆಲಸದಿಂದ ವಜಾಗೊಳಿಸಲಾಗಿತ್ತು.

ಸೇಡಿಗಾಗಿ ಬೆಂಕಿ ಹಚ್ಚಿದರು
ಬೌನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಕಂಪನಿಗೆ ಮಾಹಿತಿ ಸಿಕ್ಕಿದ್ದು, ಮೂವರ ವಿರುದ್ಧ ಕಂಪನಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಿಂದೆಯೂ ನಡೆದಿತ್ತು
ಬೌನ್ಸ್ ಬೈಕ್ಗೆ ಬೆಂಕಿ ಹಚ್ಚಿದ ಪ್ರಕರಣ ಬೆಂಗಳೂರು ನಗರದಲ್ಲಿ ಇದೇ ಮೊದಲಲ್ಲ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿಯೂ ಇದೇ ಮಾದರಿ ಪ್ರಕರಣದ ನಡೆದಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕುಡಿದ ಅಮಲಿನಲ್ಲಿ ಇಂತಹ ಕೆಲಸ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಕಳೆದ ವರ್ಷ ಬಂಧಿಸಿದ್ದರು.

ಕಡಿಮೆ ದರಕ್ಕೆ ಬೈಕ್
ಕಡಿಮೆ ದರಕ್ಕೆ ಬಾಡಿಗೆ ಬೈಕ್ ಸೇವೆ ನೀಡುವ ಬೌನ್ಸ್ ಬೆಂಗಳೂರು ನಗರದಲ್ಲಿ ಖ್ಯಾತಿಗಳಿಸಿದೆ. ಬೆಂಗಳೂರು ನಗರದಲ್ಲಿ ದಿನಕ್ಕೆ ಸುಮಾರು 1 ಲಕ್ಷ ಜನರು ಬೈಕ್ ಸೇವೆ ಬಳಸುತ್ತಿದ್ದಾರೆ. 9,500ಕ್ಕೂ ಅಧಿಕ ಬೈಕ್ಗಳನ್ನು ನಗರದಲ್ಲಿ ಬೌನ್ಸ್ ಪರಿಚಯಿಸಿದೆ.












Click it and Unblock the Notifications