ಕೊನೆಗೂ ಕಣ್ಣುಬಿಟ್ಟ ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್ ತೆರವು
ಬೆಂಗಳೂರು, ಜನವರಿ 09: ನಗರದ ಶಾಂತಿನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಬಿಜೆಪಿ ಮುಖಂಡ ಶ್ರೀಧರ್ ರೆಡ್ಡಿಯವರು ರಸ್ತೆಗೆ ತೊಂದರೆಯಾಗುವಂತೆ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ಕೊನೆಗೂ ಬಿಬಿಎಂಪಿ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಕ್ರಿಸ್ ಮಸ್ ಹಬ್ಬದ ಪೂರ್ವದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಮದರ್ ತೆರೇಸಾ ರಸ್ತೆ ಟ್ರಾಫಿಕ್ ಸಿಗ್ನಲ್ ಗೆ ಅಡ್ಡಿಯಾಗುವಂತೆ ಸಾರ್ವಜನಿಕರಿಗೆ ಶುಭಾಶಯ ಕೋರುವ ಫ್ಲೆಕ್ಸ್ ನ್ನು ಅಳವಡಿಸಿದ್ದರು. ಈ ಫ್ಲೆಕ್ಸ್ ಅಳವಡಿಸಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅನಧಿಕೃತ ಫ್ಲೆಕ್ಸ್ ತೆರವು: ರಾಜಕಾರಣಿಗಳಿಗೆ ಅನ್ವಯ ಆಗಲ್ವಾ?
ನಂತರ ಅದೇ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ, ಶ್ರೀಧರ್ ರೆಡ್ಡಿ ಕೂಡ ಹೊಸ ವರ್ಷದ ಶುಭಾಶಯ ಕೋರಿ ಲೈಫ್ ಸ್ಟೈಲ್ ಬಳಿ ಫ್ಲೆಕ್ಸ್ ಒಂದನ್ನು ಸಿಗ್ನಲ್ ಗೆ ಅಡ್ಡಲಾಗಿ ಅಳವಡಿಸಿದ್ದರು. ಇದು ಕೂಡ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡಿತ್ತು. ಇದೆಲ್ಲಾ ಪ್ರಕರಣಗಳ ಕುರಿತು ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ಸುಮಾರು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಬಗ್ಗೆ ಮಾಧ್ಯಮಗಳಲ್ಲಿ ಸತತ ವರದಿ ಪ್ರಕಟಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಇದೀಗ ಬಿಬಿಎಂಪಿ ಸಿಬ್ಬಂದಿ ಅಕ್ರಮ ಫ್ಲೆಕ್ಸ್ ನ್ನು ತೆರವುಗೊಳಿಸಿದ್ದಾರೆ. ಇನ್ನು ಮುಂದಾದರೂ ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳು ಜನರಿಗೆ ತೊಂದರೆಯಾಗದಂತೆ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ಗಳನ್ನು ಅಳವಡಿಸುವತ್ತ ಗಮನ ಹರಿಸಬೇಕಿದೆ.