ಸರ್ಕಾರಕ್ಕೆ ನಿತ್ಯ ಮೃತ್ತಿಕೆ ಅಭಿಯಾನದ ಪ್ರಗತಿ ವರದಿ ನೀಡಿ: ಅಶ್ವಥ್ ನಾರಾಯಣ
ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನಲ್ಲಿ ನವೆಂಬರ್ 11ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ನಡೆಯಲಿದೆ. ಈ ಹಿನ್ನೆಲೆ ಹಮ್ಮಿಕೊಂಡ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ಸುಗಮವಾಗಿ ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಯಿತು.
ಮಂಗಳವಾರ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಎಲ್ಲ ಜಿಲ್ಲಾಧಿಕಾರಿಗಳು, ಸಿಇಒಗಳ ಆನ್ಲೈನ್ನಲ್ಲಿ ಸಭೆ ನಡೆಸಿದರು. ಅಭಿಯಾನದ ಅಂಗವಾಗಿ ಚಾಲನೆ ಪಡೆದಿರುವ ವಿಶೇಷ ರಥಗಳು ಹಾಸನ, ಮಂಡ್ಯ, ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಉಳಿದೆಲ್ಲಡೆ ತಲುಪಿವೆ ಎಂದು ಸಚಿವರು ವಿವರಿಸಿದರು.
ಅಭಿಯಾನಕ್ಕೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ಎಲ್ಲರೂ ಬದ್ಧರಾಗಿರಬೇಕು. ವಿಶೇಷ ರಥಗಳು ಆಯಾ ಗ್ರಾಮವನ್ನು ತಲುಪುವ ಮೊದಲೇ ಸಂದೇಶ ತಲುಪಿಸಿ ಅಭಿಯಾನಕ್ಕೆ ಒದಗಿಸಿರುವ ಪೌಚುಗಳಲ್ಲಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಬೇಕು ಎಂದರು.

ನ.8ಕ್ಕೆ ರಥಗಳು ಮರಳಿ ಬೆಂಗಳೂರಿಗೆ
ಹೀಗೆ ಸಂಗ್ರಹವಾದ ಪವಿತ್ರ ಮಣ್ಣನ್ನು ನವೆಂಬರ್ 7 ರಂದು ಜಿಲ್ಲಾ ಕೇಂದ್ರಗಳಲ್ಲಿ, ನ. 8ರಂದು ಈ ರಥಗಳು ಬೆಂಗಳೂರನ್ನು ತಲುಪುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಜವಾಬ್ದಾರಿ ವಹಿಸಿದರು. ಬಳಿಕ ಪವಿತ್ರ ಮೃತ್ತಿಕೆ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಅಭಿಯಾನವು ಜಿಲ್ಲಾ ಮಟ್ಟಗಳಲ್ಲಿ ಆರಂಭವಾಗಿರುವ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕು. ನಿರ್ದಿಷ್ಟ ಮಾರ್ಗಗಳಲ್ಲಿ ಸಾಗುವ ಬಗ್ಗೆ ಎಚ್ಚರ ವಹಿಸುವ ಜೊತೆಗೆ ನಿತ್ಯ ಪ್ರಗತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಪ್ರತಿ ಗ್ರಾಮದಲ್ಲೂ ಇರುವ ಪವಿತ್ರ ಕೆರೆಕಟ್ಟೆ, ನದಿ, ಕಲ್ಯಾಣಿ ಅಥವಾ ಪುಷ್ಕರಿಣಿಯಿಂದ ಮೃತ್ತಿಕೆ ಸಂಗ್ರಹವಾಗುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಜೊತೆಗೆ ವಿಶೇಷ ರಥಗಳು ಆಗಮಿಸಿದಾಗ ದೇವಸ್ಥಾನಗಳಲ್ಲಿ ಪೂರ್ಣ ಕುಂಭ ಸ್ವಾಗತಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯರು ಆದ ಕಂದಾಯ ಸಚಿವ ಆರ್.ಅಶೋಕ್, ಸಚಿವರಾದ ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಮುನಿರತ್ನ ಪಾಲ್ಗೊಂಡಿದ್ದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications