ವಿಮಾನ ನಿಲ್ದಾಣಕ್ಕೆ ಸಿಗ್ನಲ್ ಫ್ರೀ ಮೇಲ್ಸೇತುವೆ
ಬೆಂಗಳೂರು, ಜ.3: ಹೆಬ್ಬಾಳದಿಂದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಾಗವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಮೇಲುಸೇತುವೆ ರಸ್ತೆ ನಿರ್ಮಾಣ ಕಾರ್ಯ ಬಹುತೇಕ ಮುಗಿಯುವ ಹಂತದಲ್ಲಿದ್ದು, ಜನವರಿ ಅಂತ್ಯದೊಳಗೆ ಈ ಕಾಮಗಾರಿಯ ಉದ್ಫಾಟನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಸಹದ್ಯೋಗಿ ಸಚಿವರುಗಳ ಜತೆ ಕಾಮಗಾರಿಯ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕಾಮಗಾರಿಯ ಉದ್ಫಾಟನೆಗಾಗಿ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಪರ್ನಾಂಡೀಸ್ ಅವರನ್ನು ಆಹ್ವಾನಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಹೆಬ್ಬಾಳ, ಬಾಗಲೂರು ಮೇಲು ಸೇತುವೆ ಕಾಮಗಾರಿಗಳ ವೀಕ್ಷಣೆಯನ್ನು ಮುಖ್ಯಮಂತ್ರಿಗಳು ಕೈಗೊಂಡರು. ಈ ರಸ್ತೆ ನಿರ್ಮಾಣದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಅಡೆತಡೆ ಇಲ್ಲದೆ ಶೀಘ್ರವಾಗಿ ತಲುಪಬಹುದು.
ರಸ್ತೆಯ ಅಕ್ಕಪಕ್ಕದಲ್ಲಿರುವ ಸ್ಥಳೀಯರು ರಸ್ತೆ ಕ್ರಾಸ್ ಮಾಡಲು ಅನುಕೂಲ ಕಲ್ಪಿಸಿದ್ದು, ಹೆಬ್ಬಾಳ ಬಾಗಲೂರು ಎಲಿವೇಟೆಡ್ ರಸ್ತೆ ನಿರ್ಮಾಣ ಕಾರ್ಯ 15 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದರು. ವಾಯು ಸೇನಾಪಡೆ ವಿಮಾನ ನಿಲ್ದಾಣದ ಬಳಿ ಸರ್ವಿಸ್ ರಸ್ತೆಗೆ ಸ್ಥಳಾವಕಾಶವಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವ ಅಂಟೋನಿ ಅವರೊಂದಿಗೆ ಚರ್ಚಿಸಲಾಗುವುದು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ದೇವಸ್ಥಾನ ತೆರವಿಗೆ ಮನವಿ ಮಾಡಲಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಿ.ಡಿ.ಎ ದಿಂದ ಹೆಬ್ಬಾಳವರೆಗೆ ಎಲಿವೇಟೆಡ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿದ್ದು, ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಜತೆ ಸಹದ್ಯೋಗಿಗಳು
ಲೋಕೋಪಯೋಗಿ ಸಚಿವ ಡಾ ಹೆಚ್. ಸಿ. ಮಹಾದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಕೃಷ್ಣ ಭೈರೇಗೌಡ, ನೂತನ ಸಚಿವ ಆರ್. ರೋಷನ್ ಬೇಗ್, ಸ್ಥಳೀಯ ಶಾಸಕರು, ಬಿ.ಬಿ.ಎಂ.ಪಿ. ಸದಸ್ಯರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿ.ಬಿ.ಎಂ.ಪಿ. ಬಿ.ಡಿ.ಎ. ನಮ್ಮ ಮೆಟ್ರೋ ರೈಲು, ಲೋಕೋಪಯೋಗಿ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ರಸ್ತೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು.

ಕಾಮಗಾರಿ ಖರ್ಚು ವೆಚ್ಚ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಹೆಬ್ಬಾಳ ವರ್ತುಲ ರಸ್ತೆಯ ಮೇಲ್ಮೈ ಡಾಂಬರೀಕರಣ ಕಾರ್ಯವನ್ನು 70 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಹೆಬ್ಬಾಳ - ದೇವನಹಳ್ಳಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಟೋಲ್ ಫೀ ಸಂಗ್ರಹದಿಂದ ರಿಯಾಯಿತಿ ನೀಡಲು ಕೇಂದ್ರ ಭೂಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು.

ಇತರೆ ಕಾಮಗಾರಿಗಳು
ಬೆಂಗಳೂರು ನಗರದಲ್ಲಿ 570 ಕೋಟಿ ರೂ ಅಂದಾಜು ವೆಚ್ಚದಿಂದ 240 ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಿದ್ದು ಈಗಾಗಲೇ 26 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಏಪ್ರಿಲ್ - ಮೇ ಅಂತ್ಯದೊಳಗೆ ಪೂರ್ಣಗೊಳ್ಳುತ್ತವೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಪೂರ್ಣಗೊಂಡಿದ್ದು, ಉಳಿದ ರಸ್ತೆ ಗುಂಡಿಗಳು ಹೊಸ ಕಾಮಗಾರಿಯಲ್ಲೇ ಸೇರ್ಪಡೆಗೊಳ್ಳುತ್ತವೆ.

ಎಕ್ಸ್ ಪ್ರೆಸ್ ರೈಲು ಮಾರ್ಗ
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಅತೀ ವೇಗದ ರೈಲು ಸೌಲಭ್ಯದ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಮೆಟ್ರೋ ರೈಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ರಸ್ತೆ ಏಕೆ ವಿಶೇಷ
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತ್ವರಿತ ಸಂಪರ್ಕ ಒದಗಿಸಲು ಹೆಬ್ಬಾಳ- ದೇವನಹಳ್ಳಿ ನಡುವೆ ಈ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಸಿಗ್ನಲ್ ಫ್ರೀ, ಆರು ರಸ್ತೆಗಳು ಇಲ್ಲಿವೆ. ನಗರದಿಂದ ವಿಮಾನ ನಿಲ್ದಾಣಕ್ಕೆ 20 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಸೇತುವೆ ಬಗ್ಗೆ ಇನ್ನಷ್ಟು
ಬಾಗಲೂರು ಹಾಗೂ ವಿದ್ಯಾನಗರ ಬಳಿ ಒಂದಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಜನವರಿ ಮೂರನೇ ವಾರದೊಳಗೆ ಪೂರ್ಣಗೊಳ್ಳಲಿದೆ. ವೆಂಕಟಾಲ, ಸಾತನೂರು, ಹುಣಸೇಮಾರನಹಳ್ಳಿ, ಚಿಕ್ಕಜಾಲ ಬಳಿ ಅಂಡರ್ ಪಾಸ್ ನಿರ್ಮಾಣ ಕೂಡಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಕೈಗೊಂಡಿದೆ.












Click it and Unblock the Notifications