ಫಲಿಸಲಿಲ್ಲ ಪ್ರಾರ್ಥನೆ, ಬದುಕಿ ಬರಲಿಲ್ಲ ಸಂಜನಾ
ಬೆಂಗಳೂರು, ಅಕ್ಟೋಬರ್ 19 : ಸಾವಿರಾರು ಜನರ ಪ್ರಾರ್ಥನೆ ಫಲ ಕೊಡಲಿಲ್ಲ. ಈಜಿಪುರ ಕಟ್ಟಡ ದುರಂತದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ಸಂಜನಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಗುರುವಾರ ಮಧ್ಯಾಹ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜನಾ (3) ಮೃತಪಟ್ಟಿದ್ದಾಳೆ. ಶೇ 60ರಷ್ಟು ಸುಟ್ಟಗಾಯಗಳಾಗಿದ್ದ ಸಂಜನಾಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸಂಜನಾ ಆರೋಗ್ಯ ವಿಚಾರಿಸಿದ್ದರು.

ಅಕ್ಟೋಬರ್ 16ರ ಮುಂಜಾನೆ ಬೆಂಗಳೂರಿನ ಈಜಿಪುರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ದುರಂತದಲ್ಲಿ 7 ಜನರು ಮೃತಪಟ್ಟಿದ್ದರು. ಅಶೇಷಗಳಡಿ ಸಿಲುಕಿದ್ದ ಅಶ್ವಿನಿ ಮತ್ತು ಶರವಣ ದಂಪತಿಯ 3 ವರ್ಷದ ಮಗು ಸಂಜನಾಳನ್ನು ರಕ್ಷಣೆ ಮಾಡಲಾಗಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಸಂಜನಾಳನ್ನು ರಕ್ಷಣೆ ಮಾಡಿದಾಗ ಜನರು ತಪ್ಪಾಳೆ ತಟ್ಟಿ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದರು. ಸಂಜನಾ ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ್ದರು. ಸಂಜನಾ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು.












Click it and Unblock the Notifications