ಬೆಂಗಳೂರು: ನಕಲಿ ಕೀ ಬಳಸಿ ಪರಿಚಯಸ್ಥರ ಮನೆಗೆ ಕನ್ನ

ಸರ್ದಾರ್ ಖಾನ್(38), ಲಕ್ಷ್ಮಣ ಹೆಚ್.ಪಿ.(36) ಬಂಧಿತ ಆರೋಪಿಗಳು. ಆರೋಪಿಗಳು ಮಂಡ್ಯದ ಹಲ್ಲೆಗೆರೆ ಗ್ರಾಮದ ನಿವಾಸಿಗಳಾಗಿದ್ದು ಬಂಧಿತರಿಂದ 39.70 ಲಕ್ಷ ರೂ. ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀನಗರದ ರಾಘವೇಂದ್ರ ಬ್ಲಾಕ್ನ ನಿವಾಸಿ ಸಂತೋಷ ಅವರ ಮನೆಯಿಂದ ಏ.30 ರಂದು 40 ಲಕ್ಷ ರೂ. ಕಳ್ಳತನವಾಗಿತ್ತು. ಕಳ್ಳರು ಯಾವುದೇ ಸುಳಿವನ್ನು ಬಿಡದೇ ಮನೆಯಲ್ಲಿದ್ದ ಹಣವನ್ನು ದೋಚಿದ್ದು ಕಳ್ಳರ ಪತ್ತೆ ಕಾರ್ಯಕ್ಕೆ ಪೊಲೀಸರಿಗೆ ತುಂಬಾ ಕಷ್ಟವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಗರ ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣೇಗೌಡ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪೊಲೀಸರು ಮಾಲೀಕ ಸಂತೋಷ್ ಅವರ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ನಿಜವಾದ ಕಳ್ಳರ ಬಣ್ಣ ಬಯಲಾಗಿದೆ.
ಕದ್ದದ್ದು ಹೇಗೆ? :ಸರ್ದಾರ್ಖಾನ್ ಕಬ್ಬಿಣದ ಅಲ್ಮೇರಾ ಮತ್ತು ನಕಲಿ ಕೀಗಳನ್ನು ತಯಾರಿಸುವ ವ್ಯಕ್ತಿಯಾಗಿದ್ದು ಸಂತೋಷ್ ಅವರ ತಂದೆಗೆ ಪರಿಚಯಸ್ಥನಾಗಿದ್ದ. ಈ ಪರಿಚಯದ ಆಧಾರದ ಮೇಲೆ ಬೆಂಗಳೂರಿಗೆ ತನ್ನ ಕೆಲಸಕ್ಕೆ ಬಂದಾಗ ಸಂತೋಷ್ ಅವರ ನಿವಾಸದಲ್ಲಿ ಉಳಿದುಕೊಳ್ಳುತ್ತಿದ್ದ. ಸಂತೋಷ್ ಅವರಲ್ಲಿ ಭಾರೀ ಹಣವಿದೆ ಎಂದು ತಿಳಿದು ಅವರಿಗೆ ಗೊತ್ತಿಲ್ಲದಂತೆ ಅವರ ಮನೆಯ ಕೀಯನ್ನು ಕದ್ದು ನಕಲಿ ಕೀ ಮಾಡಿಕೊಂಡಿದ್ದ.
ಮೇ ತಿಂಗಳಿನಲ್ಲಿ ಸಂತೋಷ್ ಅವರು ಆಂಧ್ರಪ್ರದೇಶದ ಚಿತ್ತೂರಿಗೆ ತೆರಳಿದ್ದ ಸಂದರ್ಭದಲ್ಲಿ ನಕಲಿ ಕೀ ಬಳಸಿ ಶ್ರೀನಗರದಲ್ಲಿರುವ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾನೆ.ತನ್ನ ಸಾಲ ತೀರಿಸಲು ಸ್ನೇಹಿತನ ಜೊತೆಗೂಡಿ ಈ ಕೃತ್ಯ ಮಾಡಿದ್ದೇನೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಲ್ಲಿ ಸರ್ದಾರ್ಖಾನ್ ಬಾಯಿಬಿಟ್ಟಿದ್ದಾನೆ.












Click it and Unblock the Notifications