ಸಿಸಿಬಿ ಪೊಲೀಸರಿಂದ ನಟ ದಿಗಂತ್ ವಿಚಾರಣೆ ಅಂತ್ಯ; ಇನ್ನೊಮ್ಮೆ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟ ದಿಗಂತ್ ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ. ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸಿಸಿಬಿ ಪೊಲೀಸರು ನೀಡಿದ್ದ ನೋಟಿಸ್ನಂತೆ ನಟ ದಿಗಂತ್ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬುಧವಾರ ಹಾಜರಾಗಿದ್ದರು. ಸುಮಾರು ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದರು.
ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ
ಮಧ್ಯಾಹ್ನ 2.30ರ ವೇಳೆಗೆ ನಟ ದಿಗಂತ್ ವಿಚಾರಣೆ ಪೂರ್ಣಗೊಳಿಸಿ ಸಿಸಿಬಿ ಕಚೇರಿಯಿಂದ ಮನೆಗೆ ವಾಪಸ್ ಆದರು. "ವಿಚಾರಣೆಗೆ ಸಹಕಾರ ನೀಡುವೆ, ಮತ್ತೊಮ್ಮೆ ವಿಚಾರಣೆಗೆ ಕರೆದರೆ ಆಗಮಿಸುವೆ" ಎಂದು ದಿಗಂತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಆದಿತ್ಯ ಆಳ್ವಾ, ಶಿವಪ್ರಕಾಶ್ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್
ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು 2ನೇ ಬಾರಿ ದಿಗಂತ್ ವಿಚಾರಣೆ ನಡೆಸಿದರು. ಸೆಪ್ಟೆಂಬರ್ 16ರಂದು ದಿಗಂತ್ ಮತ್ತು ಪತ್ನಿ ಐಂದ್ರಿತಾ ರೇ ವಿಚಾರಣೆಯನ್ನು ನಡೆಸಲಾಗಿತ್ತು.
ಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ದಿಗಂತ್ ಮೊಬೈಲ್ ಪೊಲೀಸರ ವಶದಲ್ಲಿ
ನಟ ದಿಗಂತ್ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದೆ ಎಂಬ ಮಾಹಿತಿ ಇದೆ. ಮೊಬೈಲ್ ಕರೆ, ಸಂದೇಶಗಳ ಮಾಹಿತಿ ಆಧರಿಸಿ ಅವರನ್ನು 2ನೇ ಬಾರಿಗೆ ವಿಚಾರಣೆ ನಡೆಸಲಾಗಿದೆ. ಮೂರು ಗಂಟೆಗಳ ಕಾಲ ಹಲವಾರು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಪಡೆದುಕೊಂಡಿದ್ದಾರೆ.
ದಿಗಂತ್ ಮಾತ್ರ ವಿಚಾರಣೆ
ಸೆಪ್ಟೆಂಬರ್ 16ರಂದು ಸುಮಾರು 4 ಗಂಟೆಗಳ ಕಾಲ ದಿಗಂತ್ ಮತ್ತು ಪತ್ನಿ ಐಂದ್ರಿತಾ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದರು. ಆದರೆ, ಬುಧವಾರ ದಿಗಂತ್ರನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಮತ್ತೊಮ್ಮೆ ವಿಚಾರಣೆಗೆ ಬರಬೇಕು ಎಂದು ಪೊಲೀಸರು ಕೇಳಿ ಕಳಿಸಿದ್ದಾರೆ.
ತನಿಖೆ ಚುರುಗೊಳಿಸಿದ ಪೊಲೀಸರು
ಸಿಸಿಬಿ ಪೊಲೀಸರು ಮಾದಕ ದ್ರವ್ಯ ಪೂರೈಕೆ ಜಾಲ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಆದಿತ್ಯ ಆಳ್ವಾ ಮತ್ತು ಶಿವಪ್ರಕಾಶ್ ಚಿಪ್ಪಿ ವಿರುದ್ಧ ಮಂಗಳವಾರ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ನಟಿ ರಾಗಿಣಿ ಮಾಜಿ ಗೆಳೆಯ ಶಿವಪ್ರಕಾಶ್ ಚಿಪ್ಪಿ ಪ್ರಕರಣದಲ್ಲಿ ಎ1 ಆರೋಪಿ. ಆದಿತ್ಯ ಆಳ್ವಾ ಎ6 ಆರೋಪಿಯಾಗಿದ್ದಾರೆ. ಇಬ್ಬರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿದೆ.
ಗುರುವಾರ ಜಾಮೀನು ಅರ್ಜಿ ವಿಚಾರಣೆ
ಇದೇ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ. ಇಬ್ಬರೂ ಸಹ ನ್ಯಾಯಾಂಗ ಬಂಧನಲ್ಲಿದ್ದು, ಗುರುವಾರ ಜಾಮೀನು ಸಿಗಲಿದೆಯೇ? ಕಾದು ನೋಡಬೇಕು.