ರಸ್ತೆ ಉಬ್ಬು ಕೊಟ್ಟ ಸುಳಿವಿನಿಂದ ಗೊತ್ತಾಯ್ತು ಇದು ಆಕ್ಸಿಡೆಂಟ್ ಅಲ್ಲ ಮರ್ಡರ್ !
ಬೆಂಗಳೂರು, ಮಾರ್ಚ್ 18: ಅದು ಅಪ್ಪಟ ಸುಪಾರಿ ಹತ್ಯೆ. ವಕೀಲರೊಬ್ಬರು ಕೊಟ್ಟಿದ್ದ ಪ್ಲ್ಯಾನ್ನಂತೆ ಹತ್ಯೆ ಮಾಡಲಾಗಿತ್ತು. ಅಪಘಾತ ಎಂದು ಬಿಂಬಿಸಿ ಮೃತ ವ್ಯಕ್ತಿಯನ್ನು ಮಣ್ಣು ಮಾಡಿ ಕುಟುಂಬದವರೂ ಕಣ್ಣೀರಲ್ಲಿ ಕೈ ತೊಳೆದುಕೊಂಡಿದ್ದರು ! ಆದರೆ, ಪೊಲೀಸರಲ್ಲಿ ಸಣ್ಣದೊಂದು ಅನುಮಾನ ಕಾಡುತ್ತಿತ್ತು. ಆ ಅನುಮಾನವೇ ನಿಜವಾಗಿತ್ತು. ಅಪಘಾತ ಎಂದು ಬಿಂಬಿಸಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಸುಪಾರಿ ಹಂತಕನನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಅಚ್ಚರಿ ಏನೆಂದರೆ ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಸುಳಿವು ಕೊಟ್ಟಿದ್ದು ರಸ್ತೆಯ ಒಂದು ಉಬ್ಬು. ಮೃತ ವ್ಯಕ್ತಿಯ ಹತ್ಯೆಗೆ ಆತನ ಪತ್ನಿ ಮತ್ತು ಮಕ್ಕಳೇ ಬಾಡಿಗೆ ಹಂತಕನಿಗೆ ಸುಪಾರಿ ಕೊಟ್ಟಿದ್ದರು ಎಂಬುದು ತನಿಖೆಯಲ್ಲಿ ಹೊರ ಬಿದ್ದಿದೆ. ಈ ರೋಚಕ ಕೊಲೆ ಪ್ರಕರಣದ ಸಮಗ್ರ ವರದಿ ಇಲ್ಲಿದೆ.
ಆಕ್ಸಿಡೆಂಟ್ ನಡೆದ ಸ್ಥಳ: ಅವತ್ತು ಜನವರಿ 21, ರಾತ್ರಿ 8 ಗಂಟೆ ಸಮಯ. ಗುಂಜೂರು ನಿವಾಸಿ ದೇವರಾಜ್ ವೈಟ್ಫೀಲ್ಡ್ ಸಂಚಾರ ಠಾಣೆಗೆ ಒಂದು ದೂರು ನೀಡಿದ್ದರು. ತನ್ನ ತಂದೆ ಸುಬ್ಬರಾಯಪ್ಪ ಎಂಬುವರು ಟಿವಿಎಸ್ ಎಕ್ಸ್ ಎಲ್ನಲ್ಲಿ ಹೋಗುವಾಗ ಅಪಘಾತಕ್ಕೆ ಒಳಗಾಗಿದ್ದು ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲಿಸಿದ್ದರು. ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ದೇವರಾಜ್ ದೂರಿನಲ್ಲಿ ಹೇಳಿದ್ದರು. ಇದು ಅಪಘಾತ ಇರಬಹುದು ಎಂದು ಆರಂಭದಲ್ಲಿ ಪೊಲೀಸರು ಕೂಡ ಸುಮ್ಮನಾಗಿದ್ದರು. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವೈಟ್ಫೀಲ್ಡ್ ಸಂಚಾರ ಪೊಲೀಸರು ಮುಂದಾಗಿದ್ದರು. ಈ ಸಂಬಂಧ ವೈಟ್ಫೀಲ್ಡ್ ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ರಸ್ತೆ ಉಬ್ಬಿನಿಂದ ಅನುಮಾನ
ಸುಬ್ಬರಾಯಪ್ಪ ಅಪಘಾತ ಪ್ರಕರಣ ತನಿಖೆ ನಡೆಸಲು ಹೋಗಿದ್ದ ಸಂಚಾರ ಪೊಲೀಸರಿಗೆ ದೊಡ್ಡ ಅನುಮಾನ ಕಾಡಿತ್ತು. ಸುಬ್ಬರಾಯಪ್ಪ ವಾಹನ ಅಪಘಾತಕ್ಕೆ ಕಾರಣವಾಗಿದ್ದ ಜಾಗದಲ್ಲಿ ರಸ್ತೆ ಉಬ್ಬುಗಳಿದ್ದವು. ಹೀಗಾಗಿ ಅಲ್ಲಿ ಅತಿ ವೇಗವಾಗಿ ಯಾವ ವಾಹನವೂ ಚಾಲನೆ ಮಾಡಲು ಸಾಧ್ಯವಿಲ್ಲ. ಆದರೆ, ಸುಬ್ಬರಾಯಪ್ಪ ಅವರ ವಾಹನಕ್ಕೆ ಹಿಂಬದಿಯಿಂದ ಅಪರಿಚಿತ ವಾಹನ ಹೇಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರ ತಲೆಯಲ್ಲಿ ಕೊರೆಯಲು ಶುರುವಾಯಿತು. ಸುಬ್ಬರಾಯಪ್ಪನ ಸ್ವಂತ ಊರಿಗೆ ಹೋಗಿ ವಿಚಾರಿಸಿದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಈ ಅಪಘಾತ ಪ್ರಕರಣದ ಬಗ್ಗೆ ಅನುಮಾನದ ಎಳೆಯೊಂದು ಕೊರೆಯುತ್ತಲೇ ಇತ್ತು. ಈ ಪ್ರಕರಣದ ಜಾಡು ಹಿಡಿದು ಸಿಸಿಟಿವಿ ಪರಿಶೀಲನೆ ನಡೆಸಲು ಸಂಚಾರ ವಿಭಾಗದ ಇನ್ಸ್ಪೆಕ್ಟರ್ ಎಸ್. ಆರ್. ಮಂಜುನಾಥ್ ಮುಂದಾಗಿದ್ದಾರೆ.
ಸಿಸಿಟಿವಿ ಕೊಟ್ಟ ಸಣ್ಣ ಸುಳಿವು
ಇನ್ನು ಸುಬ್ಬರಾಯಪ್ಪ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದರೆ ಗೊಂದಲದ ಹೇಳಿಕೆ ನೀಡುತ್ತಿದ್ದರು. ಇದು ಕೂಡ ಕೊಲೆಯಾಗಿರುವ ಬಗ್ಗೆ ಸಂಶಯ ಗಟ್ಟಿಗೊಳಿಸಿತ್ತು. ಎಲ್ಲರ ಗೊಂದಲ ಹೇಳಿಕೆಗಳನ್ನು ಪಡೆದಿದ್ದ ಸಂಚಾರ ಪೊಲೀಸರು ಪ್ರಕರಣದ ತನಿಖೆ ಮಾತ್ರ ಕೈ ಬಿಟ್ಟಿರಲಿಲ್ಲ. ಅಪಘಾತವಾದ ಸ್ಥಳ ಮತ್ತು ಸಮಯ ಆಧರಿಸಿ ಸಿಸಿಟಿವಿ ಸಂಗ್ರಹಿಸಿದ್ದರು. ಅದರಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರು ಅಪಘಾತ ಮಾಡಿರುವ ಸಿಸಿಟಿವಿ ದೃಶ್ಯ ಸಿಕ್ಕಿತ್ತು. ಆ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಕಾರ್ನ ಜಿಪಿಎಸ್ ಚಲನವಲನ ಆಧರಿಸಿ ಪರಿಶೀಲಿಸಿದಾಗ ರೇವಾ ಕಾರ್ ಎಂಬ ಕಾರು ರೆಂಟಲ್ ಕಂಪನಿಗೆ ಸೇರಿದ್ದು ಎಂಬ ಸಂಗತಿ ಗೊತ್ತಾಗಿದೆ. ಇದರ ಜಾಡು ಹಿಡಿದು ತನಿಖೆ ನಡೆಸಿದ್ದರು.
ಕೊನೆ ಕರೆ ಮತ್ತು ಕೊನೆ ಉಸಿರು
ಇನ್ನು ಮೃತ ಸುಬ್ಬರಾಯಪ್ಪನ ಮೊಬೈಲ್ ಕರೆ ವಿಶ್ಲೇಷಣೆ ಮಾಡಿದಾಗ ಅಫಘಾತವಾದ ದಿನ ಅನಿಲ್ ಕುಮಾರ್ ಎಂಬಾತ ಕರೆ ಮಾಡಿದ್ದ. ಅವರೇ ಕಾಳು ವಹಿವಾಟು ನಡೆಸುತ್ತಿದ್ದ ಸುಬ್ಬರಾಯಪ್ಪನಿಗೆ ಇದೇ ವಿಚಾರವಾಗಿ ಅನೀಲ್ ಕುಮಾರ್ ಎಂಬಾತ ಕರೆ ಮಾಡಿದ್ದ. ಆದರೆ ಅಪಘಾತವಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಎಲ್ಲ ಸಂಗತಿಗಳು ಇದೊಂದು ಕೊಲೆ ಪ್ರಕರಣ ಇರಬಹುದು ಎಂಬುದಕ್ಕೆ ಪುಷ್ಟಿ ನೀಡಿದ್ದವು. ಕೊನೆ ಕರೆ ಸ್ವೀಕರಿಸಿದ ಬಳಿಕವೇ ಸುಬ್ಬರಾಯಪ್ಪ ಕೊನೆಯುಸಿರು ಎಳೆದಿದ್ದರು. ಆದರೆ, ಸ್ಕಾರ್ಪಿಯೋ ಕಾರು ಮೂಲ ಪತ್ತೆ ಮಾಡಿದ ಮುಖ್ಯ ಪೇದೆಗಳಾದ ಕೃಷ್ಣಪ್ಪ ಮತ್ತು ನಾರಾಯಣಸ್ವಾಮಿ ಎಂಬುವರು ಸ್ಕಾರ್ಪಿಯೋ ಕಾರು ಚಾಲಕ ಅನಿಲ್ ಕುಮಾರ್ ನನ್ನು ಪತ್ತೆ ಮಾಡಿ ವಿಚಾರಣೆ ನಡೆಸುತ್ತಾರೆ.
Recommended Video
ಸುಪಾರಿ ಹತ್ಯೆ ಬಯಲಿಗೆ
ಸುಬ್ಬರಾಯಪ್ಪನನ್ನು ಹತ್ಯೆ ಮಾಡಲು ಆಕೆಯ ಪತ್ನಿಯೇ ಮತ್ತು ಮಕ್ಕಳು ಸುಪಾರಿ ನೀಡಿದ್ದಾರೆ. ಆರು ಲಕ್ಷ ರೂಪಾಯಿ ಹಣ ನೀಡುವುದಾಗಿ ಅನಿಲ್ ಕುಮಾರ್ಗೆ ಒಪ್ಪಿಸಿದ್ದಾರೆ. ಯಾವ ರೀತಿ ಕೊಲೆ ಮಾಡಬೇಕು ಎಂಬುದನ್ನು ವಕೀಲರೊಬ್ಬರು ಸ್ಕೆಚ್ ಹಾಕಿ ಕೊಟ್ಟಿದ್ದಾರೆ. ಅದರಂತೆ ರೆಂಟಲ್ ಕಾರು ಪಡೆದು ಅನೀಲ್ ಕುಮಾರ್ ತನ್ನ ಇಬ್ಬರು ಸ್ನೇಹಿತರ ನೆರವಿನಿಂದ ಅಪಘಾತ ಮಾಡಿಸಿ ಸುಬ್ಬರಾಯಪ್ಪ ಅವರನ್ನು ಹತ್ಯೆ ಮಾಡಿದ್ದಾನೆ. ಆನಂತರ ಕಾರನ್ನು ಮುಳಬಾಗಿಲು ಸಮೀಪದ ಗ್ಯಾರೇಜ್ನಲ್ಲಿ ರಿಪೇರಿ ಮಾಡಿಸಿ ಕಂಪನಿಗೆ ವಾಪಸು ಕೊಟ್ಟಿದ್ದಾನೆ. ಆದರೆ ರಸ್ತೆ ಉಬ್ಬು ಇರುವ ಜಾಗದಲ್ಲಿ ಅಪಘಾತ ಆಗಲ್ಲ ಎಂಬುದನ್ನು ಮರೆತಿದ್ದಾನೆ. ಹೀಗಾಗಿ ಅಪಘಾತ ಆಗದ ಜಾಗದಲ್ಲಿ ಅಪಘಾತ ಮಾಡಿದೆ ಎಂದು ಸುಳ್ಳು ಹೇಳಿ ಅನೀಲ್ ಕುಮಾರ್ ಸಿಕ್ಕಿ ಹಾಕಿಕೊಂಡಿದ್ದಾನೆ.
ಸತತ ಮೂರು ತಿಂಗಳ ಕಾಲ ಎಲ್ಲಾ ಸಾಕ್ಷಿಗಳ ಸಮೇತ ಅನೀಲ್ ಕುಮಾರ್ನನ್ನು ವಶಕ್ಕೆ ಪಡೆದು ಬಂಧಿಸಿರುವ ಪೊಲೀಸರು ಸುಬ್ಬರಾಯಪ್ಪನ ಹತ್ಯೆಗೆ ಸಂಬಂಧಿಸಿದ ಪತ್ನಿ ಹಾಗೂ ಮಕ್ಕಳು ಸುಮಾರು ಆರು ಲಕ್ಷ ರೂ. ಸುಪಾರಿ ನೀಡಿದ್ದಾರೆ. ವಕೀಲರೊಬ್ಬರು ಕೊಟ್ಟ ಪ್ಲಾನ್ನಂತೆ ಅನೀಲ್ ಕುಮಾರ್ ಅಪಘಾತ ಮಾಡುವ ಸೋಗಿನಲ್ಲಿ ಹತ್ಯೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸುಬ್ಬರಾಯಪ್ಪನ ಪತ್ನಿ ಯಶೋಧಮ್ಮ ಪುತ್ರ ದೇವರಾಜ್ ಅವರನ್ನು ಸಹ ಬಂಧಿಸಲಾಗಿದೆ. ಅಂತೂ ಖತರ್ ನಾಕ್ ಕೊಲೆ ಪ್ರಕರಣವನ್ನು ಪತ್ತೆ ಮಾಡಿರುವ ವೈಟ್ ಫೀಲ್ಡ್ ಸಂಚಾರ ಪೊಲೀಸರ ಕಾರ್ಯ ಶೈಲಿಯನ್ನು ಪೊಲೀಸ್ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.