ಬೆಂಗಳೂರು ಪೂರ್ವದಲ್ಲಿ ಕೊವಿಡ್ ನಿಯಂತ್ರಣಕ್ಕೆ ಸೋಮಣ್ಣ ತಯಾರಿ
ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ವಲಯವಾರು ಉಸ್ತುವಾರಿ ನೀಡಲಾಗಿದ್ದು, ಬೆಂಗಳೂರು ಪೂರ್ವ ವಲಯದ ಜವಾಬ್ದಾರಿ ವಹಿಸಿಕೊಂಡಿರುವ ವಿ ಸೋಮಣ್ಣ ತಮ್ಮ ಕ್ಷೇತ್ರದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
Recommended Video
ಡಾ.ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. 500 ಬೆಡ್ಗಳ ಆಸ್ಪತ್ರೆ ಇದಾಗಿದೆ. ನಾಳೆ ಮಧ್ಯಾಹ್ನದೊಳಗೆ ಅದನ್ನು ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ. 10 ವೆಂಟಿಲೇಟರ್ ವ್ಯವಸ್ಥೆ ಇರಲಿದೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ.
'ಕೊರೊನಾದಿಂದ ದೇವರೇ ಕಾಪಾಡಬೇಕು' ಹೇಳಿಕೆಗೆ ಶ್ರೀರಾಮುಲು ಸ್ಪಷ್ಟನೆ
ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಗೋವಿಂದರಾಜನಗರದಲ್ಲಿ 150 ಬೆಡ್ಗಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದೇವೆ. ಕೋವಿಡ್ ಮತ್ತು ನಾನ್ ಕೋವಿಡ್ 150 ಬೆಡ್ಗಳ ಮದುವೆ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಂದು ಕ್ಷೇತ್ರಕ್ಕೆ ಪ್ರತಿ ವಾರ್ಡ್ಗಳಲ್ಲಿ 2 ಅಂಬ್ಯುಲೆನ್ಸ್, 10 ಟಿಟಿ ವಾಹನಗಳು ಹಾಗೂ 2 ಮೃತದೇಹ ಸಾಗಿಸುವ ವಾಹನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
'ಶಿವಾಜಿನಗರದಲ್ಲೂ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಶಾಂತಿನಗರದ ಕೋವಿಡ್ ಕೇರ್ ಸೆಂಟರ್, ಫೀವರ್ ಸೆಂಟರ್ ಉದ್ಘಾಟನೆ ಮಾಡಿದ್ದೇವೆ. ಶಾಂತಿನಗರದಲ್ಲಿ 200 ಬೆಡ್ಗಳ ಆಸ್ಪತ್ರೆಯನ್ನು ಹೊಟೇಲ್ನಲ್ಲಿ ಮಾಡಲು ನಿರ್ಧರಿಸಿದ್ದೇವೆ. 1438 ಬೂತ್ಗಳು ನನ್ನ ಉಸ್ತುವಾರಿಗೆ ಬರುವ 6 ಕ್ಷೇತ್ರಗಳಲ್ಲಿ ಬರುತ್ತದೆ. ಈ ಎಲ್ಲಾ ಬೂತ್ಗಳನ್ನು ಕ್ರಿಯಾಶೀಲ ಮಾಡಿದ್ದೇವೆ. ಬೆಂಗಳೂರು ಪೂರ್ವ ವಲಯದ ಕಂಟೈನ್ಮೆಂಟ್ ಜೋನ್ಗಳ ಮನೆಗಳಿಗೆ ರೇಷನ್ ಕಿಟ್ ಕೊಟ್ಟಿದ್ದೇವೆ' ಎಂದಿದ್ದಾರೆ.
'ಬೆಂಗಳೂರು ಪೂರ್ವ ವಲಯದಲ್ಲಿ 6 ಕಂಟ್ರೋಲ್ ರೂಂ ಮಾಡಿದ್ದೇವೆ. ಹೋಂ ಕ್ವಾರೆಂಟೈನ್ಗೆ ಒಳಗಾಗುವವರಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ. ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಶಾಂತಿನಗರ, ಪುಲಿಕೇಶಿನಗರ ಎಲ್ಲಾ ಕಡೆಗಳಲ್ಲೂ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದ್ದಾರೆ.