ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಸರ್ಕಾರ ಸುಳ್ಳು ಮಾಹಿತಿ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ಅಕ್ಟೋಬರ್ 22: ಕರ್ನಾಟಕದಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಾಕಷ್ಟಿದ್ದರೂ ಸಹ ಕಾಂಗ್ರೆಸ್ ರಾಜ್ಯ ಸರ್ಕಾರವು ವಾಸ್ತವ ಪರಿಸ್ಥಿತಿ ಅರಿಯದೆ ಅವಿವೇಕತನದಿಂದ ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಇತ್ತೀಚಿನ ನನ್ನ ಉತ್ತರ ಕರ್ನಾಟಕದ ರಾಜ್ಯ ಪ್ರವಾಸದಲ್ಲಿ ಅಲ್ಲಿನ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. ಸಾವಿರಾರು ರೋಗಿಗಳು ಸೂಕ್ತ ವೈದ್ಯರುಗಳಿಲ್ಲದೆ ಪರದಾಡುವಂತಹ ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರುವ ಅಮಾನವೀಯ ಪರಿಸ್ಥಿತಿಯನ್ನು ಖುದ್ದಾಗಿ ನೋಡಿದ್ದೇನೆ ಎಂದರು.

ಸಂಚಿವ ಸಂಪುಟ ಸಭೆಯ ನಂತರದ ಸರ್ಕಾರದ ಹೇಳಿಕೆ ನೋಡಿ ನಿಜಕ್ಕೂ ಬೇಸರ ತರಿಸುತ್ತಿದೆ. ರಾಜ್ಯದಲ್ಲಿ 3251 ಎಂಬಿಬಿಎಸ್ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸಿರುವಾಗ ಕೇವಲ 1897 ಹುದ್ದೆಗಳು ಮಾತ್ರ ಖಾಲಿ ಇದೆ. 1354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ.
ಸರ್ಕಾರದ ಬೊಕ್ಕಸಕ್ಕೆ ಹೊರೆ
ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತದೆ ಎಂಬ ನೆಪ ಒಡ್ಡಿ ಸರ್ಕಾರವು ವೈದ್ಯರುಗಳ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯನ್ನು ರದ್ದುಗೊಳಿಸಲು ಸುಗ್ರೀವಾಜ್ಞೆಯನ್ನು ಹೊರಳಿಸುತ್ತಿರುವುದು ನಿಜಕ್ಕೂ ಸರ್ಕಾರಕ್ಕೆ ರಾಜ್ಯದ ಜನತೆಯ ಆರೋಗ್ಯದ ಬಗ್ಗೆ ತಾತ್ಸಾರ ನೀತಿ ಇರುವುದನ್ನು ಸ್ಪಷ್ಟ ಪಡಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ದೆಹಲಿಯ ಮೊಹಲ್ಲ ಕ್ಲಿನಿಕ್ ಗಳ ಮಾದರಿಯಲ್ಲಿ ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್ ಗಳನ್ನು ಕೇವಲ ಮತ ಸೆಳೆಯುವ ದೃಷ್ಟಿಯಿಂದ ಅತುರಾತುರವಾಗಿ ಸ್ಥಾಪಿಸಿದರು. ಈಗ ರಾಜ್ಯದ ಎಲ್ಲಾ ನಮ್ಮ ಕ್ಲಿನಿಕ್ ಗಳಲ್ಲಿ ವೈದ್ಯರುಗಳೇ ಇಲ್ಲದೆ ಯಾವುದೇ ಸೂಕ್ತ ಆರೋಗ್ಯ ಸೇವೆಗಳು ಲಭಿಸದೆ ಸಾರ್ವಜನಿಕರು ಯಾರು ಅಲ್ಲಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಕ್ಕೆ ಆರೋಗ್ಯ ದೃಷ್ಟಿಯಲ್ಲಿ ತಾತ್ಸಾರ
ಈಗ ಬಂದಿರುವ ಕಾಂಗ್ರೆಸ್ ಸರ್ಕಾರವು ಹೊಸ ವೈದ್ಯರುಗಳನ್ನು ನಮ್ಮ ಆರೋಗ್ಯ ಕ್ಲಿನಿಕ್ ಗಳಲ್ಲಿ ನೇಮಿಸದೆ ಇರುವುದನ್ನು ಗಮನಿಸಿದರೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಸಹ ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಎಷ್ಟು ತಾತ್ಸಾರ ಮನೋಭಾವವಿದೆ ಎಂಬುದನ್ನು ಎತ್ತು ತೋರಿಸುತ್ತದೆ.
ಯಾವುದೇ ವೈದ್ಯರುಗಳ ಕೊರತೆ ಇಲ್ಲ ಎಂದು ಸುಳ್ಳು ಹೇಳುವುದನ್ನು ಬಿಟ್ಟು, ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು , ಜಿಲ್ಲಾಸ್ಪತ್ರೆಗಳು ಹಾಗೂ ನಮ್ಮ ಕ್ಲಿನಿಕ್ ಗಳಲ್ಲಿ ವೈದ್ಯರುಗಳನ್ನು ನೇಮಿಸಬೇಕು ಹಾಗೂ ಕೂಡಲೇ ಈ ಸುಗ್ರೀವಾಜ್ಞೆಯನ್ನು ಹೊರಡಿಸುವುದನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.












Click it and Unblock the Notifications