Darshan Thoogudeepa: ದರ್ಶನ್ಗೆ ನಿಜಕ್ಕೂ ಏನಾಗಿದೆ? ವೈದ್ಯರು ಕೊಟ್ರು ಮಹತ್ವದ ಮಾಹಿತಿ
131 ದಿನಗಳ ಜೈಲು ವಾಸದ ಬಳಿಕ ನಟ ದರ್ಶನ್ಗೆ ಹೈಕೋರ್ಟ್ನಲ್ಲಿ ಆರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ನೀಡಲಾಗಿದೆ. ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದ ನಟ ದರ್ಶನ್ ಅಲ್ಲಿಂದ ಸೀದಾ ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್ಮೆಂಟ್ಗೆ ಬಂದಿದ್ದರು, ಗುರುವಾರ ಮಗ ವಿನೀಶ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು, ದೀಪಾವಳಿ ಹಬ್ಬದ ಪೂಜೆ ಮುಗಿಸಿರುವ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ನಟ ದರ್ಶನ್ರನ್ನು ನೋಡಲು ಆಸ್ಪತ್ರೆ ಬಳಿ ಕೂಡ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ದರ್ಶನ್ಗೆ ಏನಾಗಿದೆ?
ದರ್ಶನ್ಗೆ ಬೆನ್ನುಹುರಿಯಲ್ಲಿ ನೋವು ಹೆಚ್ಚಾಗಿದ್ದು ಎಡಗಾಲು ಜೋಮು ಹಿಡಿದಂತೆ ಆಗುತ್ತಿದೆ ಎಂದು ಹೇಳಿದ್ದರು. ಇದೀಗ ದರ್ಶನ್ರ ಸಮಸ್ಯೆ ಏನೆಂದು ತಿಳಿಯಲು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನಿಡಿದ ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ, ಸದ್ಯಕ್ಕೆ ದರ್ಶನ್ಗೆ ಚೆಕಪ್ ಮಾಡಲಾಗಿದೆ. ಅವರ ಎಂಆರ್ ಐ, ಎಕ್ಸ್-ರೇ, ರಕ್ತ ಪರೀಕ್ಷೆ ಇನ್ನೂ ಆಗಬೇಕಿದೆ. ಎಲ್ಲಾ ವರದಿಗಳು ಬಂದ ಬಳಿಕ ಯಾವ ಚಿಕಿತ್ಸೆಯ ಅಗತ್ಯವಿದೆ ಎನ್ನುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.
ಸದ್ಯ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಎಡಗಾಲಿನ ಸೆಳೆತದಿಂದ ಕೂಡ ಬಳಲುತ್ತಿದ್ದು ಎಲ್ಲಾ ವರದಿಗಳನ್ನು ನೋಡಿದ ಬಳಿಕವಷ್ಟೇ ಸ್ಪಷ್ಟ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು. ದರ್ಶನ್ಗೆ ಫಿಸಿಯೋಥೆರಪಿ ಮಾಡಬೇಕಾ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿದೆಯಾ, ಅವರಿಗೆ ಎಷ್ಟು ದಿನ ವಿಶ್ರಾಂತಿ ಬೇಕಾಗಬಹುದು ಎನ್ನುವ ಬಗ್ಗೆ ವೈದ್ಯರು ವರದಿಗಳನ್ನು ನೋಡಿದ ಬಳಿಕ ನಿರ್ಧರಿಸಲಿದ್ದಾರೆ.
ದರ್ಶನ್ ಇದೀಗ ವೈದ್ಯಕೀಯ ವಿವರಗಳನ್ನು ಕೋರ್ಟ್ಗೆ ಸಲ್ಲಿಸಬೇಕಾಗಿರುವುದರಿಂದ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆ ಮಾಡಿಸಿದ್ದಾರೆ. ಸೋಮವಾರ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ದರ್ಶನ್ರ ವೈದ್ಯಕೀಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ದರ್ಶನ್ಗೆ ಗಂಭೀರ ಸಮಸ್ಯೆಯಿದ್ದರೆ, ಇನ್ನೂ ಹೆಚ್ಚು ದಿನ ವಿಶ್ರಾಂತಿ ಬೇಕಾದಲ್ಲಿ ಅವರ ಮಧ್ಯಂತರ ಜಾಮೀನು ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಕೂಡ ಇದೆ.
ಸದ್ಯ ದರ್ಶನ್ ಜೈಲಿನಿಂದ ಹೊರಬಂದಿರುವುದು ಅಭಿಮಾನಿಗಳಿಗೆ ಖುಷಿ ತಂದಿದ್ದರೂ, ಅವರಿಗೆ ಕೋರ್ಟ್ ಹಾಕಿರುವ ಷರತ್ತುಗಳು ಅಭಿಮಾನಿಗಳಿಂದ ದೂರ ಉಳಿಯುವಂತೆ ಮಾಡಿದೆ. ದರ್ಶನ್ ಬೇಗ ಗುಣಮುಖರಾಗಲಿ, ಹಾಗೆ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿ ಹೊರಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications