ಆನ್ ಲೈನ್ ಹೆಲ್ತ್ ಕೇರ್ ಭವಿಷ್ಯದ ಬಗ್ಗೆ ಡಾ.ದೇವಿಶೆಟ್ಟಿ ಸುಳಿವು
ಬೆಂಗಳೂರು, ಜುಲೈ 20: ಹೆಲ್ತ್ ಕೇರ್ ಅನ್ನೋದು ದೊಡ್ಡ ಮಟ್ಟದಲ್ಲಿ ದತ್ತಾಂಶಗಳ ವ್ಯಾಖ್ಯಾನವೇ ಆಗಿರುತ್ತದೆ. ಹಲವು ಕಾಯಿಲೆಗಳನ್ನು ಗುರುತಿಸುವುದೇ ವಿವಿಧ ಅಂಶಗಳ ಮೂಲಕ ಎಂದು ಹೆಸರಾಂತ ಹೃದಯ ಕಾಯಿಲೆ ತಜ್ಞ ಹಾಗೂ ನಾರಾಯಣ ಹೆಲ್ತ್ ಸಮೂಹದ ಅಧ್ಯಕ್ಷ ದೇವಿಶೆಟ್ಟಿ ಶುಕ್ರವಾರ ಹೇಳಿದರು.
ತುಂಬ ಸೂಕ್ಷ್ಮವಾದ ಕಾಯಿಲೆಗಳನ್ನು ಗುರುತಿಸುವ ವಿಚಾರಕ್ಕೆ ಬಂದರೆ ಸಾಫ್ಟ್ ವೇರ್ ಗಳ ಬಳಕೆ ಇನ್ನೂ ತುಂಬ ದೂರಕ್ಕೆ ಸಾಗಬೇಕಿದೆ ಎಂದು ಹೇಳಿದರು. ಸೀಮಿತವಾದ ಅಂಶಗಳ ಸಹಾಯದಿಂದ ಕಾಯಿಲೆ ಗುರುತಿಸುವ ವಿಚಾರದಲ್ಲಿ ಯಂತ್ರಗಳೇ ಉತ್ತಮ ಎಂದು ಬೆಂಗಳೂರಿನಲ್ಲಿ ಐಐಎಂ-ಬಿ ಆಯೋಜಿಸಿದ್ದ ನಾಯಕತ್ವ ಸಮಾವೇಶದಲ್ಲಿ ಅಭಿಪ್ರಾಯಪಟ್ಟರು.
ಯಾವುದೇ ಚಿಕಿತ್ಸೆ ವಿಚಾರದಲ್ಲಿ ವೈದ್ಯರು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾಫ್ಟ್ ವೇರ್ ಗಳಿಂದ ಎರಡನೇ ಆಯ್ಕೆ ಕೇಳಿ ತೆಗೆದುಕೊಳ್ಳುವುದು ಕಡ್ಡಾಯ ಆಗುವ ದಿನ ದೂರ ಇಲ್ಲ. ಅದು ಮುಂದಿನ ಐದು-ಹತ್ತು ವರ್ಷಗಳಲ್ಲೇ ಆಗಬಹುದು ಎಂದರು.

ರೋಗಿಯ ದತ್ತಾಂಶದ ಆಧಾರದಲ್ಲಿ ವೈದ್ಯರು ಆನ್ ಲೈನ್ ಮೂಲಕವೇ ಚಿಕಿತ್ಸೆಗೆ ಶಿಫಾರಸು ಮಾಡಬಹುದು ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ಯಾವಾಗ ಶಸ್ತ್ರಚಿಕಿತ್ಸೆ ಅನಿವಾರ್ಯ ಆಗುತ್ತದೋ ಆಗಷ್ಟೇ ರೋಗಿಯನ್ನು ನೇರಾನೇರ ಭೇಟಿ ಮಾಡಬೇಕಾದ ಅಗತ್ಯ ಬರುತ್ತದೆ ಎಂದರು.
ರೋಗಿಯ ಬಗ್ಗೆ ಮಾಹಿತಿಯನ್ನು ವೈದ್ಯರು ಮೊಬೈಲ್ ಫೋನ್ ಮೂಲಕವೇ ಪಡೆಯುವುದು ಸಾಧ್ಯವಾಗಬೇಕು. ಏಕೆಂದರೆ ಕೀ ಬೋರ್ಡ್ ಬಳಕೆ ರೂಢಿಯಲ್ಲಿ ಇಲ್ಲದ ವೈದ್ಯರಿಗೆ ರೋಗಿ ಹೇಳುವ ಒಂದು ಗಂಟೆಯಷ್ಟು ವಿಚಾರವನ್ನು ಸಾಫ್ಟ್ ವೇರ್ ಮೂಲಕ ದಾಖಲಿಸುವುದಕ್ಕೆ ಎರಡು ಗಂಟೆ ಸಮಯ ಬೇಕು ಎಂದರು.
ಹೀಗೆ ಮಾಡುವುದರಿಂದ ವೈದ್ಯರ ಪ್ರಾಮುಖ್ಯ ಕಡಿಮೆ ಆಗುತ್ತದಾ ಅಂದರೆ- ಇಲ್ಲ ಎಂದು ಅವರು ಹೇಳಿದರು. ಸದ್ಯದಲ್ಲೇ ಆನ್ ಲೈನ್ ಹೆಲ್ತ್ ಕೇರ್ ಎಂಬುದು ಬರಲಿದೆ ಎಂದು ಕೂಡ ಹೇಳಿದರು.
ಸ್ಕೈ ಡೈವಿಂಗ್ ಗಿಂತ ಅಮೆರಿಕದ ಆಸ್ಪತ್ರೆಗೆ ಸೇರುವುದು ಹೆಚ್ಚು ಅಪಾಯಕಾರಿ ಎಂದು ದೇವಿಶೆಟ್ಟಿ ತಮಾಷೆಯಾಗಿ ಹೇಳಿದರು.












Click it and Unblock the Notifications