Bengaluru Second Airport: ಈ ಜಾಗದಲ್ಲಿ ನಿರ್ಮಾಣವಾಗಲಿದೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು, ಜುಲೈ 15: ರಾಜಧಾನಿ ಬೆಂಗಳೂರಿನ ಅಭಿವೃದ್ಧಿ, ಹೆಚ್ಚುತ್ತಿರುವ ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ರಾಜ್ಯ ಸರ್ಕಾರ ನಗರದ ನಾನಾ ದಿಕ್ಕುಗಳ ಏಳೆಂಟು ಸ್ಥಳಗಳ ಪರಿಶೀಲನೆ ಕೈಗೊಂಡಿತ್ತು. ಇದೀಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಾಂತ್ರಿಕ ಮಾನದಂಡ ಆಧರಿಸಿ ಮೂರು ಸ್ಥಳವನ್ನ ಪರಿಶೀಲಿಸಿದ್ದು, ಮುಂದಿನ ವಾರ ಕೇಂದ್ರ ವಿಮಾನಯಾನ ಸಚಿವರನ್ನ ಭೇಟಿ ಮಾಡಿ ಅಂತಿಮವಾಗಿ ನಿರ್ಧಾರವನ್ನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ಅವರು ಮಾಹಿತಿ ನೀಡಿದ್ರು. ಇದೀಗ ಎರಡನೇ ವಿಮಾನ ನಿಲ್ದಾಣದ ಜಾಗದ ಕುರಿತು ಮಾಜಿ ಸಂಸದ ಡಿ ಕೆ ಸುರೇಶ್ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಡಿ ಕೆ ಸುರೇಶ್ ಅವರು ಮಾತನಾಡಿ, ಎರಡನೇ ವಿಮಾನ ನಿಲ್ದಾಣ ಎಲ್ಲಿ ಬರುತ್ತದೆಯೋ ಗೊತ್ತಿಲ್ಲ. ಒಟ್ಟು ಮಾಗಡಿ ಸುತ್ತಮುತ್ತಲೇ ಬರುತ್ತದೆ. ಬೆಂಗಳೂರು ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಜನರ ರೈತರ ಮಕ್ಕಳು ರೈತರಾಗಿ ಇರಲು ಒಪ್ಪುತ್ತಿಲ್ಲ. ಈ ಚಿಂತನೆಯೇ ನಮ್ಮಲ್ಲಿದೆ. ನಿಮ್ಮ ಮನೆಗೆ ಸೊಸೆ ಬಂದು ಸಗಣಿ ಎತ್ತು ಎಂದರೆ ಎತ್ತುತ್ತಾರೆಯೇ? ನಿಮ್ಮ ಮಕ್ಕಳು ಎತ್ತುತ್ತಾರೆಯೇ? ಇದಕ್ಕೆ ಏನು ಮಾಡಬೇಕು ಎಂಬುದೇ ನನ್ನ ಚಿಂತೆಯಾಗಿದೆ ಎಂದು ತಿಳಿಸಿದರು.
ಜನ ನನಗೆ ವಿಶ್ರಾಂತಿ ನೀಡಿದ್ದು, ನನಗೆ ಯಾವುದೇ ಒತ್ತಡವಿಲ್ಲ. ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ. 2028ರಲ್ಲಿ ನಿಮ್ಮನ್ನು ಮತ್ತೆ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ನಾನು ಮಾಡುತ್ತೇನೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮದೇ ಸರ್ಕಾರ ಇದೆ. ನಾನು ಹಾಗೂ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡುವ ಮಾತು ಕೊಟ್ಟಿದ್ದೇವೆ. ನಾವು ಅದನ್ನು ಮಾಡುತ್ತೇವೆ ಎಂದರು.
ಬಮುಲ್ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ. ಈ ಕೆಲಸವನ್ನು ನಾನು ಮಾಡುತ್ತೇನೆ. ಇದಕ್ಕೆ ಎಲ್ಲಾ ನಾಯಕರ ಬೆಂಬಲ ಬೇಕು. ಎಲ್ಲರ ಜೊತೆಯೂ ನಾನು ಚರ್ಚೆ ನಡೆಸುತ್ತೇನೆ. ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ,ಉತ್ಪನ್ನಗಳನ್ನು ಬಳಸಿ ಎಂದರು.
ನಂದಿನಿ ಉತ್ಪನ್ನಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಪನ್ನೀರಿನ ಬೇಡಿಕೆಗೆ ಶೇ 5 ರಷ್ಟು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರೇ ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ಮಾರುಕಟ್ಟೆ ಹೆಚ್ಚು ಮಾಡಿಕೊಡಬೇಕು. ಹೊಸಕೋಟೆಯಲ್ಲಿ 22 ಎಕರೆ ಜಮೀನು, ದೊಡ್ಡಬಳ್ಳಾಪುರದಲ್ಲಿಯೂ 8 ಎಕರೆ ಜಮೀನಿದೆ ಅಲ್ಲಿಯೂ ಹಾಲು ಸಂಸ್ಕರಣ ಕೇಂದ್ರ ತೆರೆಯಬೇಕು ಎಂಬುದು ಅಲ್ಲಿನವರ ಬೇಡಿಕೆ. ಮಾಗಡಿ ತಾಲ್ಲೂಕಿನ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ಕಾವೇರಿ, ಹೇಮಾವತಿ, ಎತ್ತಿನಹೊಳೆಯಿಂದಲೂ ನೀರು ಬರುವ ಸಂಭವವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.












Click it and Unblock the Notifications