Bengaluru: ಮಳೆ ಬಂದು ಹೊಳೆ ಆದರೂ ಅಂಡರ್ ಪಾಸ್ ಗಳಿಗೆ ಮೇಲ್ಛಾವಣಿ ಬಿದ್ದಿಲ್ಲ
ಬೆಂಗಳೂರು, ಸೆ 5: ನಗರದಲ್ಲಿ ಬಂದ ಮಳೆಗೆ ಕೆ. ಆರ್. ಸರ್ಕಲ್ ನಲ್ಲಿ ಓರ್ವ ಮಹಿಳೆಯ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ಅಂಡರ್ ಪಾಸ್ ಗಳಿಗೆ ಉತ್ತಮ ಸೌಲಭ್ಯ ಕೊಡುತ್ತೇವೆ, ಹೈಟೆಕ್ ಮಾಡುತ್ತೇವೆ, ದೆಹಲಿ ಮಾದರಿಯಲ್ಲಿ ಹೈಟೆಕ್ ಮಾಡುತ್ತೇವೆ ಅಂತ ಪಾಲಿಕೆಯ ಅಧಿಕಾರಿಗಳು ಆಶ್ವಾಸನೆಗಳ ಮಹಾಪೂರವನ್ನೇ ಕೊಟ್ಟಿದ್ದರು. ಆದರೆ ಅಸಲಿಗೆ ಅಂಡರ್ ಪಾಸ್ ಗಳ ಸ್ಥಿತಿ ಬದಲಾಗಲೇ ಇಲ್ಲ..
ಮೊನ್ನೆ ಬಂದ ಒಂದೇ ಮಳೆಗೆ ಹಲವು ಅಂಡರ್ ಪಾಸ್, ರಸ್ತೆ ಜಲ ದಿಗ್ಬಂಧನವಾಗಿತ್ತು. ಸಿಲಿಕಾನ್ ಸಿಟಿ ಅಂಡರ್ ಪಾಸ್ ಗಳ ಮೇಲ್ಛಾವಣೆ ಅಳವಡಿಕೆಗೆ ಗ್ರಹಣ ಹಿಡಿದಿದ್ಯಾ ಅಂತ ಜನ ಪ್ರಶ್ನೆ ಮಾಡಲು ಶುರು ಮಾಡಿದರು. ಮಳೆ ಬಂದು ಸಿಟಿ ಹೊಳೆ ಆದ ಮೇಲೆ ರೆಡಿಯಾಗುತ್ತಾ ದೆಹಲಿ ಮಾದರಿಯ ಅಂಡರ್ ಪಾಸ್ ಅಂತ ಸಾರ್ವಜನಿಕರು ಈಗ ಪಾಲಿಕೆಯ ವಿರುದ್ಧ ಕಿಡಿ ಕಾರುತ್ತಾ ಇದ್ದಾರೆ. ಹೀಗೆ ಕಿಡಿ ಕಾರೋದಕ್ಕೆ ಕಾರಣವಿದೆ.

ಕೆ.ಆರ್.ಸರ್ಕಲ್ ಅವಘಡದ ಬಳಿಕ ಅಂಡರ್ ಪಾಸ್ ಗಳಿಗೆ ದೆಹಲಿ ಮಾದರಿಯಲ್ಲಿ ಮೇಲ್ಛಾವಣಿ ಅಳವಡಿಕೆಗೆ ಪಾಲಿಕೆ ಮುಂದಾಗಿತ್ತು. ಆದರೆ ಮೊದಲ ಹಂತದಲ್ಲೇ ಆಮೆಗತಿಯ ಕಾಮಗಾರಿ ನಡೆಯುತ್ತಿರುವುದು ಈಗ ಬಟಾ ಬಯಲಾಗಿದೆ. ಇನ್ನೊಂದು ಕಡೆ ಮೇಲ್ಛಾವಣಿ ಅಳವಡಿಕೆಯ ಕಳಪೆ ಕಾಮಗಾರಿ ಅನ್ನೋದು ಕ್ಲಿಯರ್ ಆಗಿ ಕಾಣಿಸುತ್ತಾ ಇದೆ.
ಆಮೆಗತಿಯಲ್ಲಿ ಸಾಗುತ್ತಿರುವ ಅಂಡರ್ ಪಾಸ್ ಹೈಟೆಕ್ ಆಗೋ ಕಾಮಗಾರಿ ಮುಗಿಯೋದು ಯಾವಾಗ? ಇನ್ನುಳಿದ ಡೇಂಜರಸ್ ಅಂಡರ್ ಪಾಸ್ ಕಾಮಗಾರಿ ಆರಂಭ ಯಾವಾಗ ? ದೆಹಲಿ ಮಾದರಿಯ ಅಂಡರ್ ಪಾಸ್ ಸಿಲಿಕಾನ್ ಸಿಟಿಯಲ್ಲಿ ರೆಡಿಯಾಗಲು ಇನ್ನೂ ಎಷ್ಟು ದಿನ ಬೇಕು? ಇದು ಸದ್ಯ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಎದುರಾಗುತ್ತಿರುವ ಪ್ರಶ್ನೆ.
ಬೆಂಗಳೂರು ಪ್ರವಾಸಕ್ಕೆ ಬಂದ ಮಹಿಳೆ ದುರ್ಮರಣ
ಕೆ.ಆರ್. ಸರ್ಕಲ್ ನಲ್ಲಿ ಬೆಂಗಳೂರು ಪ್ರವಾಸಕ್ಕೆ ಬಂದ ಮಹಿಳೆ ದುರ್ಮರಣ ಹೊಂದಿ ತಿಂಗಳುಗಳೇ ಕಳಿತಾ ಬಂದರೂ ಬೆಂಗಳೂರಿನಲ್ಲಿ ಇನ್ನೂ ದೆಹಲಿ ಮಾದರಿಯ ಅಂಡರ್ ಪಾಸ್ ರೆಡಿಯಾಗಿಲ್ಲ. ಕಳೆದ ಭಾರಿ ವರುಣನ ಆರ್ಭಟಕ್ಕೆ ಬೆಂಗಳೂರು ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿತ್ತು. ಒತ್ತುವರಿ ತೆರವು ಮಾಡದೇ ನಗರದಲ್ಲಿ ನೀರು ಹೊರ ಹೋಗಲು ಜಾಗ ಇಲ್ಲದೇ ಸಿಲಿಕಾನ್ ಸಿಟಿ ಸಮುದ್ರ ಆಗಿತ್ತು.

ಸಕಲ ಸಿದ್ಧತೆ ಮಾಡಿ ಕೊಂಡಿದ್ದೇವೆ
ಈ ಬಾರಿ ಹಾಗಾಗಲ್ಲ ಸಕಲ ಸಿದ್ಧತೆ ಮಾಡಿ ಕೊಂಡಿದ್ದೇವೆ ಅಂತ ಪಾಲಿಕೆ ಹೇಳೋಕೆ ಶುರು ಮಾಡಿದ ಹೊತ್ತಲ್ಲಿಯೇ ಕೆ.ಆರ್. ಸರ್ಕಲ್ ನಲ್ಲಿ ಅಂಡರ್ ಪಾಸ್ ಅಲ್ಲಿ ನೀರು ತುಂಬಿ ಯುವತಿ ಉಸಿರಾಟ ನಿಲ್ಲಿಸುವಂತಾಗಿತ್ತು. ಅದಾದ ಬಳಿಕ ಅಂಡರ್ ಪಾಸ್ ಗಳಲ್ಲಿ ಯಾವುದೇ ಸಾವು ನೋವು ಸಂಭವಿಸದ ಹಾಗೇ ಬೆಂಗಳೂರು ಅಂಡರ್ ಪಾಸ್ ರೆಡಿ ಮಾಡುತ್ತೇವೆ ಅಂತ ಅಧಿಕಾರಿಗಳು ಭರವಸೆ ಕೊಟ್ಟಿದ್ದರು. ಆ ಭರವಸೆ ಈಗಲೂ ಬರೀ ಭರವಸೆಯಾಗಿಯೇ ಉಳಿದಿದೆ...
ಮೇಲ್ಛಾವಣೆ ಅಳವಡಿಕೆಗೆ ಪಾಲಿಕೆ ಮೀನಾ ಮೇಷ
ಸಿಲಿಕಾನ್ ಸಿಟಿ ಅಂಡರ್ ಪಾಸ್ ಗಳ ಮೇಲ್ಛಾವಣೆ ಅಳವಡಿಕೆಗೆ ಪಾಲಿಕೆ ಮೀನಾ ಮೇಷ ಎಣಿಸುತ್ತಿದೆ. ಮೊದಲ ಹಂತದಲ್ಲೇ ಆಮೆಗತಿಯ ಕಾಮಗಾ ನಡೆಯುತ್ತಿದೆ. ಮೇಲ್ಛಾವಣೆ ಅಳವಡಿಕೆಗೆ ಕಾಲಮಿತಿ ಪಾಲಿಸುತ್ತಿಲ್ಲ, ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಾ ಇದೆ. ಮೊದಲನೇ ಕಾಮಗಾರಿಯೇ ತಡವಾದರೆ ಉಳಿದ ಅಂಡರ್ ಪಾಸ್ ಗಳ ಕಾಮಗಾರಿ ಯಾವಾಗ ಅನ್ನೋದು ಜನರ ಪ್ರಶ್ನೆ.
ನಗರದಲ್ಲಿ ಒಟ್ಟು 53 ಅಂಡರ್ ಪಾಸ್ ಗಳ ಪೈಕಿ 8/10 ಕಡೆ ಗಂಭೀರ ಸಮಸ್ಯೆ ಆಗುವ ಸಾಧ್ಯತೆ ಇದೆ ಅಂತ ಪಾಲಿಕೆ ಅಧಿಕಾರಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಕಾವೇರಿ ಜಂಕ್ಷನ್, ಲೀ ಮೆರಿಡಿಯನ್, ಕೆ.ಆರ್. ವೃತ್ತ ಅಂಡರ್ ಪಾಸ್ ಅಲ್ಲಿ ಮೇಲ್ಛಾವಣಿ ಹೊಂದಿಸುವ ತೀರ್ಮಾನವಾಗಿತ್ತು.
ಮೊದಲ ಹಂತದಲ್ಲಿ ಲೀ ಮೆರಿಡಿಯನ್ ಅಂಡರ್ ಪಾಸ್
ಮೊದಲ ಹಂತದಲ್ಲಿ ಲೀ ಮೆರಿಡಿಯನ್ ಅಂಡರ್ ಪಾಸ್ ನ ಒಂದು ಕಡೆ ಮಾತ್ರ ಮೇಲ್ಛಾವಣಿ ಹೊದಿಕೆ ಅಳವಡಿಸಲಾಗಿತ್ತು. ಸುಮಾರು 32 ಲಕ್ಷ ರೂ ಖರ್ಚು ಮಾಡಿ ಈ ಮೇಲ್ಛಾವಣಿ ಹಾಕುತ್ತೇವೆ ಅಂತಾ ಪಾಲಿಕೆ ಹೇಳಿತ್ತು. ಮೇಲ್ಛಾವಣಿ ಹಾಕಿ 4 ತಿಂಗಳು ಆಗಿಲ್ಲ , ಅಂಡರ್ ಪಾಸ್ ಮೇಲ್ಛಾವಣಿ ಸಂಪೂರ್ಣ ಕಿತ್ತು ಹೋಗಲು ಶುರು ಆಗಿದೆ. ಕಂಬಿಗಳು ಬೆಂಡ್ ಆಗಿದೆ. ಒಂದೇ ಮಳೆಗೆ ಮೇಲ್ಛಾವಣಿ ಶೀಟುಗಳು ಗಾಳಿಗೆ ಕಕ್ಕಾಬಿಕ್ಕಿಯಾಗಿವೆ.. ಅರ್ಧಬರ್ಧ ಕಾಮಗಾರಿ ಮಾಡಿ, ಜನರ ದುಡ್ಡನ್ನ ಪೋಲು ಮಾಡಿ, ಪಾಲಿಕೆ ನಿರ್ಲಕ್ಷ್ಯವನ್ನ ಮತ್ತೆ ತೋರಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಇನ್ನೂ ವರುಣ ತನ್ನ ಆರ್ಭಟ ಶುರು ಮಾಡಿಲ್ಲ. ಮಳೆರಾಯ ತನ್ನ ಅಸಲಿ ಮುಖ ತೋರಿಸಿದರೆ ವರುಣನ ರೌದ್ರ ನರ್ತನ ಬೆಂಗಳೂರಿನಲ್ಲಿ ಶುರು ಆದರೆ ಕಳೆದ ಬಾರಿಯ ಹಾಗೇ ಈ ಬಾರಿಯೂ ರಾಷ್ಟ್ರ ಮಟ್ಟದಲ್ಲಿ ಮಾನ ಮರ್ಯಾದೆ ಹರಾಜಾಗುವುದರಲ್ಲಿ ಅನುಮಾನ ಇಲ್ಲ..












Click it and Unblock the Notifications