Aparna: ನಮ್ಮ ಮೆಟ್ರೋ ನಿಲ್ದಾಣಕ್ಕೆ ಅಪರ್ಣಾ ಹೆಸರಿಡಿ
ಬೆಂಗಳೂರು, ಜುಲೈ 13: ಕನ್ನಡದ ಖ್ಯಾತ ನಟಿ, ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದ ಅಪರ್ಣಾ ತಮ್ಮ ಭಾಷಾ ಬಳಕೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದಿದ್ದರು.
ಬೆಂಗಳೂರು ನಗರದ ಜೀವನಾಡಿ ನಮ್ಮ ಮೆಟ್ರೋ. ನಮ್ಮ ಮೆಟ್ರೋ ರೈಲಿನಲ್ಲಿ ಕೇಳಿ ಬರುವ ಘೋಷಣೆಗಳು ಅಪರ್ಣಾ ಅವರ ಧ್ವನಿಯಲ್ಲಿವೆ. ಅಪರ್ಣಾ ನಿಧನಕ್ಕೆ ಬಿಎಂಆರ್ಸಿಎಲ್ ಸಂತಾಪವನ್ನು ಸೂಚಿಸಿದೆ.

ನಿಲ್ದಾಣಕ್ಕೆ ಅಪರ್ಣಾ ಹೆಸರು ಇಡಿ: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. 65ಕ್ಕೂ ಅಧಿಕ ನಮ್ಮ ಮೆಟ್ರೋ ನಿಲ್ದಾಣಗಳಿವೆ. ಅಪರ್ಣಾ ಅವರ ಹೆಸರನ್ನು ಉಳಿಸಲು ಮೆಟ್ರೋ ನಿಲ್ದಾಣವೊಂದನ್ನು ಅವರ ಹೆಸರು ಇಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು ನಟ ದಿ. ಶಂಕರ್ ನಾಗ್ ಹೆಸರನ್ನು ಸಹ ನಿಲ್ದಾಣವೊಂದನ್ನು ಇಡಬೇಕು ಎಂದು ಒತ್ತಾಯಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪೋಸ್ಟ್ನಲ್ಲಿ, 'ಕನ್ನಡ ಚಿತ್ರರಂಗದ ಮೇರು ನಟ ಶ್ರೀ ಶಂಕರ್ ನಾಗ್ ಹಾಗು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಶ್ರೀಮತಿ ಅಪರ್ಣ ಅವರ ಕೊಡುಗೆ ಕರ್ನಾಟಕಕ್ಕೆ ಹಾಗು ಕನ್ನಡಕ್ಕೆ ಅಪಾರವಾದುದು' ಎಂದು ಬಣ್ಣಿಸಿದ್ದಾರೆ.
ಕನ್ನಡ ಚಿತ್ರರಂಗದ ಮೇರು ನಟ ಶ್ರೀ ಶಂಕರ್ ನಾಗ್ ಹಾಗು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಶ್ರೀಮತಿ ಅಪರ್ಣ ಅವರ ಕೊಡುಗೆ ಕರ್ನಾಟಕಕ್ಕೆ ಹಾಗು ಕನ್ನಡಕ್ಕೆ ಅಪಾರವಾದುದು.
— Basanagouda R Patil (Yatnal) (@BasanagoudaBJP) July 13, 2024
ಶ್ರೀ ಶಂಕರ್ ನಾಗ್ ಹಾಗು ಶ್ರೀಮತಿ ಅಪರ್ಣ ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ. @OfficialBMRCL pic.twitter.com/z6CasvyZpc
'ಶ್ರೀ ಶಂಕರ್ ನಾಗ್ ಹಾಗೂ ಶ್ರೀಮತಿ ಅಪರ್ಣ ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ' ಎಂದು ಬಸನಗೌಡ ಪಾಟೀಲ್ ಆಗ್ರಹಿಸಿದ್ದು, ಬಿಎಂಆರ್ಸಿಎಲ್ ಅನ್ನು ಟ್ಯಾಗ್ ಮಾಡಿದ್ದಾರೆ.
ನಟಿ, ನಿರೂಪಕಿ ಅಪರ್ಣಾ ನಿಧನಕ್ಕೆ ಬಿಎಂಆರ್ಸಿಎಲ್ ಸಂತಾಪ ಸೂಚಿಸಿತ್ತು. 'ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ' ಎಂದು ಹೇಳಿತ್ತು.
'ಅವರಿಗೆ ದೇವರ ವರದಾನದ ಧ್ವನಿ ಇತ್ತು. ನಮ್ಮ ಮೆಟ್ರೋ ಹಾಗೂ ತಮ್ಮ ಮಾಸದ ದನಿಗೂ ಇರುವ ನಂಟು ಎಂದಿಗೂ ಕಳಚದು. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ' ಎಂದು ಬಿಎಂಆರ್ಸಿಎಲ್ ಸಂತಾಪದಲ್ಲಿ ತಿಳಿಸಿತ್ತು.
ಬೆಂಗಳೂರು ನಗರಕ್ಕೆ ಮೆಟ್ರೋ ಸೇವೆ ಬೇಕು ಎಂಬುದು ಶಂಕರ್ನಾಗ್ ಕನಸಾಗಿತ್ತು. ಈಗ ನಗರದಲ್ಲಿ ಎರಡು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಆದ್ದರಿಂದ ಶಂಕರ್ನಾಗ್ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡಬೇಕು ಎಂಬ ಕೂಗು ಪದೇ ಪದೇ ಕೇಳಿಬರುತ್ತಲೇ ಇದೆ.
ಮೆಟ್ರೋ ರೈಲು ಆರಂಭದ ಕನಸು ಕಂಡಿದ್ದ ಶಂಕರ್ನಾಗ್ ಸುಮಾರು 9 ಲಕ್ಷ ರೂ. ಹಣ ವೆಚ್ಚ ಮಾಡಿ ನೀಲನಕ್ಷೆ ತಯಾರು ಮಾಡಿದ್ದರು. ಬೆಂಗಳೂರು ನಗರದಲ್ಲಿ ಮೆಟ್ರೋ ಸೇವೆ ಆರಂಭಗೊಂಡು 10 ಪ್ಲಸ್ ವರ್ಷಗಳು ಕಳೆದರೂ ಸಹ ಶಂಕರ್ನಾಗ್ ಹೆಸರನ್ನು ನಿಲ್ದಾಣವೊಂದಕ್ಕೆ ಇಟ್ಟಿಲ್ಲ ಎಂಬ ಬೇಸರ ಅನೇಕರಲ್ಲಿದೆ.
ಶಂಕರ್ನಾಗ್ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಕುರಿತು ಅವರ ಸ್ನೇಹಿತ, ಹಿರಿಯ ನಟ ರಮೇಶ್ ಭಟ್ ಕೆಲವು ದಿನಗಳ ಹಿಂದೆ ಮಾತನಾಡಿದ್ದರು. "ಬೆಂಗಳೂರು ನಗರದಲ್ಲಿ 60ಕ್ಕೂ ಹೆಚ್ಚು ನಮ್ಮ ಮೆಟ್ರೋ ನಿಲ್ದಾಣಗಳಿವೆ. ಕೆಲವು ನಿಲ್ದಾಣಗಳಿಗೆ ಸ್ವಾಮೀಜಿಗಳು, ಹಳ್ಳಿಗಳು, ಕಂಪನಿಗಳ ಹೆಸರು ಇಡಲಾಗಿದೆ. ಆದರೆ ಮೆಟ್ರೋ ಯೋಜನೆಯ ರೂವಾರಿ ಎಂದೇ ಹೇಳಬಹುದಾದ ಶಂಕರ್ನಾಗ್ ಹೆಸರು ಇಟ್ಟಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.












Click it and Unblock the Notifications