ದಯಾನಂದ ಸ್ವಾಮಿ ರಾಸಲೀಲೆ ಸಿ.ಡಿ ಪ್ರಕರಣ ಮತ್ತೆ ಜೀವಂತ
ಬೆಂಗಳೂರು, ನವೆಂಬರ್ 28 : ಯಲಹಂಕ ಬಳಿಯ ಹುಣಮಾರನಹಳ್ಳಿ ಮದ್ದೇವಣಾಪುರ ಜಂಗಮ ಮಠದ ದಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣ ಇನ್ನೇನು ಜನರ ಸ್ಮೃತಿಯಿಂದ ಮಾಸುತ್ತಿದೆ ಎನ್ನುವಾಗ ರಾಸಲೀಲೆ ಸಿ.ಡಿಯಲ್ಲಿದ್ದ ಯುವತಿ ಇಂದು (ನವೆಂಬರ್ 28) ವಿಡಿಯೊ ಒಂದನ್ನು ಬಿಡುಗಡೆ ಮಾಡಿ ಪ್ರಕರಣಕ್ಕೆ ಮತ್ತೆ ಜೀವ ತಂದಿದ್ದಾಳೆ.
ರಾಸಲೀಲೆ ಸಿ.ಡಿಯಲ್ಲಿ ಸ್ವಾಮಿ ಜೊತೆ ಪಲ್ಲಂಗ ಹಂಚಿಕೊಂಡಿದ್ದ ಸ್ಯಾಂಡ್ಲ್ವುಡ್ ನಟಿ ಪ್ರಕರಣದ ಸಂಬಂಧ ತನ್ನ ಹೇಳಿಕೆ ಒಳಗೊಂಡ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ತನಗೆ ಕೊಲೆ ಬೆದರಿಕೆ ಇರುವುದಾಗಿ ವಿಡಿಯೊದಲ್ಲಿ ಹೇಳಿದ್ದಾಳೆ.

ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಹಾಗೂ ಕೊಲೆ ಬೆದರಿಕೆಗಳು ಇದ್ದ ಕಾರಣದಿಂದ ಇಷ್ಟು ದಿನ ಅಜ್ಞಾತವಾಗಿ ಇರಬೇಕಾಗಿ ಬಂದಿತ್ತು ಎಂದಿದ್ದಾಳೆ.
ಇನ್ನು ಮೂರು ನಾಲ್ಕು ದಿನಗಳಲ್ಲಿ ಬೆಂಗಳೂರಿಗೆ ಬಂದು ನನಗೆ ಕಿರುಕುಳ ಕೊಟ್ಟ, ನನ್ನನ್ನು ತಮ್ಮ ಲಾಭಕ್ಕೆ ಬಳಸಿಕೊಂಡ 10 ಜನರ ವಿರುದ್ಧ ದೂರು ದಾಖಲಿಸುವುದಾಗಿ ನಟಿ ಹೇಳಿದ್ದಾಳೆ.
"ನನ್ನ ಸ್ಥಿತಿ ಯಾವ ಹೆಣ್ಣಿಗೂ ಬಾರದೇ ಇರಲಿ ಎಂದು ಕಣ್ಣೀರು ಹಾಕಿರುವ ನಟಿ, ನನ್ನನ್ನು ಕೆಲವರು ವೈಯಕ್ತಿಕ ಲಾಭಕ್ಕೆ ದಾಳವಾಗಿ ಬಳಸಿಕೊಂಡಿದ್ದಾರೆ' ಎಂದಿದ್ದಾಳೆ. ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಎಲ್ಲ ಸತ್ಯಗಳನ್ನು ಹೊರಗೆಡವುದಾಗಿಯೂ ಆಕೆ ಹೇಳಿದ್ದಾಳೆ.

ಆತ್ಮಹತ್ಯೆಗೆ ಯತ್ನಿಸಿದಾಗ ನನ್ನ ಕುಟುಂಬ ನನ್ನ ಬೆನ್ನಿಗೆ ನಿಂತು ಅನ್ಯಾಯ ಮಾಡಿದವರ ವಿರುದ್ಧ ಹೋರಾಡಲು ಶಕ್ತಿ ನೀಡಿದ್ದಾರೆ ಹಾಗಾಗಿ ಹೋರಾಡಲು ಮುಂದಾಗಿದ್ದೇನೆ ಎಂದು ಆಕೆ ಹೇಳಿದ್ದಾಳೆ.
ಸಿಡಿ ಬಿಡುಗಡೆ ಆಗಿ ವಿವಾದ ಉಂಟಾದಾಗ ನಟಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.












Click it and Unblock the Notifications