Actor Darshan: ಸೋಮವಾರ ನಟ ದರ್ಶನ್ಗೆ ಜಾಮೀನು ಸಿಗುತ್ತಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ತೂಗುದೀಪ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್ ಜಾಮೀನು ನೀಡುವಂತೆ ಕೋರಿ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್ ವಕೀಲರಾದ ಎಸ್. ಸುನಿಲ್ ಕುಮಾರ್ ಹೈಕೋರ್ಟ್ ಜಡ್ಜ್ ಜಯಶಂಕರ ಅವರಿಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಧೀಶರು, ಪ್ರಾಸಿಕ್ಯೂಷನ್ಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರಕ್ಕೆ (ಸೆ.23ರಂದು) ವಿಚಾರಣೆ ಮುಂದೂಡಿದ್ದಾರೆ.
ಜಾಮೀನು ಅರ್ಜಿ ಸಲ್ಲಿಕೆ ವಿಚಾರದಲ್ಲಿ ನಟ ದರ್ಶನ್ ಪರ ವಕೀಲರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಜೂನ್ 8ರಂದು ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿದ್ದು, ಜೂನ್ 11ರಂದು ನಟ ದರ್ಶನ್ರನ್ನು ಕೊಲೆ ಆರೋಪದ ಮೇಲೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. 100ಕ್ಕೂ ಹೆಚ್ಚು ದಿನಗಳಿಂದ ನಟ ದರ್ಶನ್ ಜೈಲಿನಲ್ಲಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರನ್ನು ಇಲ್ಲಿ ಐಷಾರಾಮಿ ವ್ಯವಸ್ಥೆ ನೀಡಲಾಗಿದೆ ಎಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ಕೊಲೆ ಪ್ರಕರಣದ ಬಗ್ಗೆ ಸುಧೀರ್ಘವಾದ ತನಿಖೆ ನಡೆಸಿತ್ತು. ಸೆಪ್ಟೆಂಬರ್ 4ರಂದು 3991 ಪುಟಗಳ ಚಾರ್ಜ್ಶೀಟ್ ಅನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಚಾರ್ಜ್ಶೀಟ್ ಹಾಕಿದ 18 ದಿನಗಳ ಬಳಿಕ ನಟ ದರ್ಶನ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ ಅನ್ನು ಕೂಲಂಕುಷವಾಗಿ ಅಧ್ಯಯನ ಮಾಡಿರುವ ದರ್ಶನ್ ಪರ ವಕೀಲರು ಸೋಮವಾರ ನಡೆಯುವ ವಿಚಾರಣೆಯಲ್ಲಿ ಬಲವಾಗಿ ವಾದ ಮಂಡಿಸುವ ಸಾಧ್ಯತೆ ಇದೆ.
ಜಾಮೀನು ಸಿಗುತ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತೀವ್ರವಾಗಿ ತನಿಖೆ ಮಾಡಿದ್ದರು. ಹಲವು ಸಾಕ್ಷಿಗಳ ಹೇಳಿಕೆಯನ್ನು ಜಡ್ಜ್ ಎದುರು ದಾಖಲಿಸಲಾಗಿದೆ. ಒಟ್ಟು 17 ಆರೋಪಿಗಳ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕಲಾಗಿದ್ದು ಎಲ್ಲವನ್ನೂ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.
ಈಗಾಗಲೇ ಎ1 ಪವಿತ್ರಾ ಗೌಡ ಎರಡು ಬಾರಿ ಜಾಮೀನಿಗೆ ಅರ್ಜಿ ಹಾಕಿದ್ದರು. ಮೊದಲ ಬಾರಿ ಅರ್ಜಿ ತಿರಸ್ಕರಿಸಲಾಗಿತ್ತು. ಎರಡನೇ ಬಾರಿ ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರಿಂದ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಹಿಂಪಡೆದಿದ್ದು, ಕೆಳ ಹಂತದ ನ್ಯಾಯಾಲದಲ್ಲಿ ಮತ್ತೆ ಜಾಮೀನಿಗೆ ಪವಿತ್ರಾ ಗೌಡ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.












Click it and Unblock the Notifications