ಸೋಲಿಗೆ ಆಪರೇಷನ್ ಕಮಲ ಕಾರಣ: ಈಶ್ವರಪ್ಪ ಹೇಳಿಕೆಗೆ ಸಿ.ಟಿ. ರವಿ ಏನಂದ್ರು?
ಬೆಂಗಳೂರು, ಜೂನ್ 26: ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲು ರಾಜ್ಯ ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಒಬ್ಬರ ಮೇಲೊಬ್ಬರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಈಗ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪಕ್ಷಾಂತರಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಆಪರೇಷನ್ ಕಮಲದಿಂದ ಪಕ್ಷದಲ್ಲಿ ಶಿಸ್ತು ಹಾಳಾಗಿದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದಕ್ಕೆ ಈಗ ಅನುಭವಿಸುವಂತಾಗಿದೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದಿಂದ ಬಿಜೆಪಿ ಸೋತಿದೆ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷವನ್ನೇ ತೊರೆದು ಬಂದಿದ್ದ ಪಕ್ಷಾಂತರಿಗಳಿಗೆ ಈಶ್ವರಪ್ಪ ಹೇಳಿಕೆ ಆಘಾತ ನೀಡಿದೆ.

ಈಶ್ವರಪ್ಪ ಹೇಳಿಕೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. "ಕೆ.ಎಸ್. ಈಶ್ವರಪ್ಪ ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಅವರು ಕಾಂಗ್ರೆಸ್ ಬಿಟ್ಟು ಬಂದಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದ ಬಹಳಷ್ಟು ವಲಸಿಗರು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಲೋಕಸಭಾ ಚುನಾವಣೆಗೆ ಹೋಗುತ್ತೇವೆ. ಇಲ್ಲಿ ಹೊರಗಿನವರು, ಒಳಗಿನವರು ಎನ್ನುವ ಭೇದವಿಲ್ಲ" ಎಂದು ಹೇಳಿದರು.
ಈಶ್ವರಪ್ಪ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯೆ
ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ನಾನು ಅವರ ಹೇಳಿಕೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ದೆಹಲಿಯಲ್ಲಿ ನಾನು ಅರ್ಕಾವತಿಗೆ ಸಂಬಂಧಿಸಿದಂತೆ ಮಾತ್ರ ಹೇಳಿಕೆ ನೀಡಿದ್ದೆ. ಅರ್ಕಾವತಿ ವಿಚಾರದಲ್ಲಿ ಕಠಿಣವಾದ ನಿಲುವು ತೆಗೆದುಕೊಂಡಿದ್ದರೆ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದೆ. ಪಕ್ಷ ಬಿಟ್ಟು ಬಂದವರ ತಲೆಗೆ ಎಲ್ಲವನ್ನೂ ಕಟ್ಟಲು ಇಷ್ಟ ಪಡುವುದಿಲ್ಲ. ಯಾರು ಸರಿ ಎಂದು ನಾವು ಹೇಳಲ್ಲ, ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ನಮ್ಮಿಂದ ಏನೂ ತಪ್ಪಾಗಿಲ್ಲ ಎಂದು ಹೇಳುವುದಿಲ್ಲ, ನಮ್ಮಿಂದ ತಪ್ಪಾಗಿವೆ." ಎಂದು ಹೇಳಿದರು.
ನಾವ್ ವಾಪಸ್ ಸೇರಿಸಿಕೊಳ್ಳಲ್ಲ!
ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ನ ಹಿರಿಯ ನಾಯಕ, ಸಚಿವ ಎಂಬಿ ಪಾಟೀಲ್ ಅವರು, ಮುನಿರತ್ನ, ಸುಧಾಕರ, ಎಮ್ಟಿಬಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಸೇರಿದಂತೆ ಬಿಜೆಪಿ ಸೇರಿದ 17 ಮಂದಿ ಈಶ್ವರಪ್ಪ ಆರೋಪಕ್ಕೆ ಉತ್ತರ ಕೊಡಲಿ ಎಂದು ಹೇಳಿದ್ದು, ಬಿಟ್ಟು ಹೋದವರನ್ನು ವಾಪಸ್ ಕಾಂಗ್ರೆಸ್ಗೆ ಸೇರಿಸಿಕೊಳ್ಳಲ್ಲ ಎಂದು ಹೇಳಿದರು.
ಹೊಂದಾಣಿಕೆ ರಾಜಕಾರಣದ ಬಗ್ಗೆ ಹಲವು ನಾಯಕರು ಹೇಳಿಕೆ ನೀಡಿದ್ದ ಬಗ್ಗೆ ಮಾತನಾಡಿದ್ದ ಈಶ್ವರಪ್ಪ. ಇದರ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು, ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೊಂದಾಣಿಕೆ ನಡೆದಿಲ್ಲ. ಬಿಜೆಪಿಯಲ್ಲಿ ಶಿಸ್ತು ಇಲ್ಲ, ಕಾಂಗ್ರೆಸ್ ಗಾಳಿ ನಮಗೂ ಬೀಸಿದೆ,ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications