ಪೂರ್ವಾನುಮತಿ ಇಲ್ಲದೇ ಬಿಬಿಎಂಪಿ ರಸ್ತೆ ಕತ್ತರಿಸಿದ್ರೆ ಕ್ರಿಮಿನಲ್ ಕೇಸು: ಗೌರವ ಗುಪ್ತಾ
ಬೆಂಗಳೂರು, ಫೆ. 02: ಪಾಲಿಕೆಯ ಪೂರ್ವಾನುಮತಿ ಪಡೆಯದೇ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ರಸ್ತೆಯನ್ನು ಕಡಿದರೆ, ಅವರ ವಿರುದ್ಧ ಕ್ರಿಮಿನಲ್ ದಾವೆ ದಾಖಲಾಗಲಿದೆ!
ಇಂತದ್ದೊಂದು ಖಡಕ್ ಸಂದೇಶವನ್ನು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಬಲ್ ಮಾಫಿಯಾಗೆ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳು ಬಿದ್ದು ಮುಗ್ಧ ಜನರ ಜೀವವನ್ನು ಬಲಿ ಪಡಿಯುತ್ತಿವೆ. ಎರಡು ದಿನದ ಹಿಂದಷ್ಟೇ ಮಾಗಡಿ ಮುಖ್ಯ ರಸ್ತೆಯಲ್ಲಿ ಶಿಕ್ಷಕಿ ರಸ್ತೆ ಗುಂಡಿಗೆ ಬಲಿಯಾಗಿದ್ದಳು. ಇದನ್ನು ಖಂಡಿಸಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ದೂರು ನೀಡಿದ್ದರು.

ಕೇಬಲ್ ಮಾಫಿಯಾ, ಜಲಮಂಡಳಿ ಕಾಮಗಾರಿಗಳಿಂದ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ರಸ್ತೆ ಅವಘಡಗಳಲ್ಲಿ ಮುಗ್ಧರು ಜೀವ ಕಳೆದುಕೊಂಡ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇದರಿಂದ ಎಚ್ಚೆತ್ತ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ರಸ್ತೆ ಕತ್ತರಿಸುವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಸ್ತೆ ಕಡಿಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತರು, ಕೆಲವು ರಸ್ತೆಗಳಲ್ಲಿ ವಿದ್ಯುತ್ ಕೇಬಲ್ಗಳು ಇವೆ. ಜಲಮಂಡಳಿ ಅಳವಡಿಸಿರುವ ಕುಡಿಯುವ ನೀರಿನ ಪೈಪುಗಳು ಇವೆ. ಅವುಗಳಿಗೆ ಹಾನಿ ಉಂಟಾದಾಗ ರಸ್ತೆ ಕತ್ತರಿಸಬೇಕಾಗುತ್ತದೆ. ಆದರೆ ರಸ್ತೆ ಕತ್ತರಿಸಬೇಕಾದರೆ, ಬಿಬಿಎಂಪಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಅಭಿವೃದ್ಧಿ ಪಡಿಸಿದ ರಸ್ತೆಯನ್ನು ಒಮ್ಮೆ ಕತ್ತರಿಸಿದರೆ, ಬಳಿಕ ಎಷ್ಟೇ ದುರಸ್ತಿ ಮಾಡಿದರೂ ಹಿಂದಿನ ಸ್ಥಿತಿಗೆ ಅದು ಬರುವುದಿಲ್ಲ. ಬಿಬಿಎಂಪಿ ಸ್ವಾಧೀನಕ್ಕೆ ಒಳಪಡುವ ಯಾವುದೇ ರಸ್ತೆಯನ್ನು ಅಕ್ರಮವಾಗಿ ಕತ್ತರಿಸಿದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದೇನೆ. ನಮ್ಮ ಸ್ವಾಧೀನದಲ್ಲಿರುವ ರಸ್ತೆಗಳ ರಕ್ಷಣೆ ನಮ್ಮ ಅಧಿಕಾರಿಗಳ ಹೊಣೆ ಎಂದು ಹೇಳಿದ್ದಾರೆ.
ಹಲವಾರು ಪ್ರಕರಣದಲ್ಲಿ ಬಿಬಿಎಂಪಿ ಪೂರ್ವಾನುಮತಿ ಪಡೆಯದೇ ರಸ್ತೆ ಕತ್ತರಿಸಲಾಗಿದೆ. ಅಕ್ರಮವಾಗಿ ರಸ್ತೆ ಕತ್ತರಿಸಿದ ಪ್ರಕರಣಗಳಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಲಿದ್ದೇವೆ. ಇದಕ್ಕೆ ಕಡಿವಾಣ ಹಾಕಲು ಹೊಸ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು.
ಬಿಬಿಎಂಪಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಜೆಟ್ನಲ್ಲಿ ಒದಗಿಸುವಂತೆ ಕೋರಿ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಗ್ಗೆ ನಗರದ ಶಾಸಕರ ಜತೆ ಸಮಾಲೋಚಿಸಿದ್ದಾರೆ. ಅನೇಕ ಕಾರ್ಯಕ್ರಮ ಈಗಗಲೇ ಘೋಷಣೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಅನುದಾನ ಹಂಚಿಕೆ ಮಾಡಲಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.












Click it and Unblock the Notifications