ಕಾರ್ಮಿಕ ಸಚಿವರನ್ನು ಬದಲಿಸಿ ಸರ್ಕಾರಕ್ಕೆ ಎಎಪಿ ಆಗ್ರಹ
ಬೆಂಗಳೂರು, ಏಪ್ರಿಲ್ 30: ''ಬೆಂಗಳೂರು ನಗರವೊಂದರಲ್ಲೇ ಸುಮಾರು 97 ಸಾವಿರದಷ್ಟು ವಲಸೆ ಕಾರ್ಮಿಕರು ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಲಾಕ್ಡೌನ್ ಪರಿಣಾಮ ಇವರೆಲ್ಲ ಅಕ್ಷರಶಃ ಬೀದಿಪಾಲಾಗಿದ್ದಾರೆ, ಉದ್ಯೋಗ ಭದ್ರತೆ ಇಲ್ಲದೆ, ಕೈಯಲ್ಲಿ ಹಣವಿಲ್ಲದೆ ದಿನನಿತ್ಯದ ಬದುಕನ್ನು ಕಷ್ಟದಲ್ಲಿ ತಳ್ಳುತ್ತಿದ್ದಾರೆ.'' ಎಂದು ಎಎಪಿ ಸರ್ಕಾರಕ್ಕೆ ಇವರ ರಕ್ಷಣೆಗೆ ಆಗ್ರಹಿಸಿದೆ.
Recommended Video
ಇಂತಹ ಸಂದಿಗ್ಧ ಪರಿಸ್ಥಿತಿಯ ಲಾಭ ಪಡೆದ ಕಿಡಿಗೇಡಿಗಳು ಕೆ.ಆರ್.ಪುರಂ ವ್ಯಾಪ್ತಿಯ ಎಚ್.ಬಿ.ಆರ್ ವಾರ್ಡ್ ವ್ಯಾಪ್ತಿಯಲ್ಲಿ ನೆಲೆಸಿದ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರ ಮೇಲೆ (ಬುಧವಾರ ಏಪ್ರಿಲ್ 29) ದಾಳಿ ಮಾಡಿ ಅವರು ನೆಲಸಿದ್ದಂತಹ ಸುಮಾರು 150 ಶೆಡ್ಗಳನ್ನು ಕೆಡವಿರುವುದು, 15 ಶೆಡ್ಗಳನ್ನು ಸುಟ್ಟು ಹಾಕಿರುವುದು ನಿಜಕ್ಕೂ ಅಮಾನವೀಯ ಹೀನ ಕೃತ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಬೇಸರ ವ್ಯಕ್ತ ಪಡಿಸಿದೆ.
ಆಟೋ, ಕ್ಯಾಬ್, ಚಾಲಕರಿಗೆ ಆರ್ಥಿಕ ಸಹಾಯ: ಎಎಪಿ ಮನವಿ
ನಾಚಿಕೆಗೇಡಿನ ಸಂಗತಿ
ಆಮ್ ಆದ್ಮಿ ಪಕ್ಷ ಈ ಹಿಂದೆ ನೀಡಿದ 3 ಪತ್ರಿಕಾ ಹೇಳಿಕೆಗಳಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಹಾಗೂ ರಕ್ಷಣೆಗೆ, ಜೀವನ ನಿರ್ವಹಣೆಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸ ಬೇಕು ಎಂದು ಆಗ್ರಹಿಸಿತ್ತು ಹಾಗೂ ಕೆಲವೊಂದು ಸಲಹೆಗಳನ್ನು ನೀಡಿತ್ತು, ಆದರೂ ಸಹ ವಲಸೆ ಕಾರ್ಮಿಕರ ಹೀಯಾಳಿಸುವಿಕೆ, ದೈಹಿಕ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಈ ವಿಷಯಗಳ ಕುರಿತು ಮಾಧ್ಯಮಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು ಸಹ ಮಾನ್ಯ ಕಾರ್ಮಿಕ ಸಚಿವರು ದಿವ್ಯ ಮೌನ ವಹಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಏನೇನು ಕ್ರಮ ಕೈಗೊಳ್ಳಲಾಗಿದೆ?
ಅಸಂಘಟಿತ ಕಾರ್ಮಿಕರುಗಳಿಗೆ ಸರಿಯಾಗಿ ಸಂಬಳ ದೊರೆಯುತ್ತಿದೆಯೇ, ಸವಲತ್ತುಗಳು ಸೂಕ್ತ ರೀತಿಯಲ್ಲಿ ತಲುಪಿವೆಯೇ ಎನ್ನುವ ಮಾಹಿತಿಯೂ ಸಹ ಸರ್ಕಾರದ ಬಳಿ ಇಲ್ಲ. ಬೆಂಗಳೂರಿನಂತಹ ಬೃಹತ್ ವಾಣಿಜ್ಯ ನಗರಿಯಲ್ಲಿ ಇಂದು ಲಕ್ಷಾಂತರ ಸಂಖ್ಯೆಯ ಕಾರ್ಮಿಕರುಗಳು ಕರ್ನಾಟಕದ ಹಾಗೂ ಭಾರತದ ಮೂಲೆ ಮೂಲೆಗಳಿಂದ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವುಗಳಲ್ಲಿ ಬಹುಪಾಲು ಮಂದಿಗೆ ಭಾಷೆಯ ಸಮಸ್ಯೆಯೂ ಸಹ ಇದೆ. ಇಂತಹ ಸೂಕ್ಷ್ಮ ಸಮಸ್ಯೆಗಳ ನಿವಾರಣೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ? ಇದರ ಮಾಹಿತಿಯೂ ಅಪೂರ್ಣ.
ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು
ಮುಖ್ಯಮಂತ್ರಿಗಳು ಲಾಕ್ ಡೌನ್ ಆರಂಭದಲ್ಲಿ ಹೇಳಿದಂತೆ ಯಾವುದೇ ಕಾರ್ಮಿಕರಿಗೂ ಕಿಂಚಿತ್ತೂ ತೊಂದರೆ ಆಗಬಾರದು ಎಂಬ ಕಠಿಣ ಆದೇಶವನ್ನು ನೀಡಿದ್ದರೂ ಸಹ ಮುಖ್ಯಮಂತ್ರಿಗಳ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲದಾಗಿದೆ. ಲಾಕ್ ಡೌನ್ ನಂತಹ ಈ ಮಹಾ ಭೀತಿಯ ಸಂದರ್ಭದಲ್ಲಿ ಕಾರ್ಮಿಕ ಹಿತ, ಕಾರ್ಮಿಕರ ಮೇಲಿನ ಶೋಷಣೆಯನ್ನು ತಡೆಯಲು ಮಾಡಿರುವ ಈ ಆದೇಶವನ್ನು ಪಾಲಿಸದವರ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ಜರುಗಿಸುವುದರ ಮೂಲಕ ಕಟ್ಟುನಿಟ್ಟಾಗಿ ಈ ಆದೇಶವನ್ನು ಕಾರ್ಮಿಕ ಇಲಾಖೆ ಪಾಲಿಸಬಹುದಿತ್ತು.
ಕಾರ್ಮಿಕರ ಹಿತ ಬಲಿ
ಆದರೆ ಕಾರ್ಮಿಕ ಇಲಾಖೆಯ ಮಂತ್ರಿಗಳಿಂದ ಹಿಡಿದು ಅಧಿಕಾರಿಗಳ ತನಕ ಯಾರೂ ಸಹ ಇತ್ತ ಕಡೆ ಗಮನ ಹರಿಸಿಲ್ಲ. ರಾಜ್ಯದಲ್ಲಿ ಇಂತಹ ನೂರಾರು ದೂರುಗಳಿದ್ದರೂ ಸಹ ಇವುಗಳನ್ನು ಆಲಿಸುವ ಗೋಜಿಗೆ ಕಾರ್ಮಿಕ ಇಲಾಖೆ ಹೋಗಿಲ್ಲದಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕಾರ್ಮಿಕರ ಹಿತವನ್ನು ಬಲಿ ಕೊಡುತ್ತಿರುವ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಇದ್ದೂ ಸಹ ಸತ್ತಂತಾಗಿದೆ. ಈ ಇಲಾಖೆಯ ಮಂತ್ರಿಗೆ ಇಲಾಖೆಯ ಗಂಧ ಗಾಳಿಯೂ ಸಹ ಗೊತ್ತಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಕಾರ್ಮಿಕ ಸಚಿವರನ್ನು ಬದಲಿಸಿ
ಆದ ಕಾರಣ ಅತ್ಯಂತ ನಿಷ್ಕ್ರಿಯರಾಗಿರುವ ಕಾರ್ಮಿಕ ಸಚಿವರನ್ನು ಈ ಕೂಡಲೇ ಬದಲಾಯಿಸಿ ಕ್ರಿಯಾಶೀಲ ವ್ಯಕ್ತಿಯೊಬ್ಬರನ್ನು ಈ ಮಹತ್ವದ ಖಾತೆಗೆ ನೇಮಿಸಲು ಎಎಪಿ ಆಗ್ರಹಿಸುತ್ತದೆ..ಮುಖ್ಯಮಂತ್ರಿಗಳು ಈ ಕೂಡಲೇ ಇತ್ತ ಕಡೆ ಗಮನ ಹರಿಸಿ ಅತ್ಯಂತ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸಬೇಕು, ಕಾರ್ಮಿಕ ಮಂತ್ರಿಗಳಿಗೆ ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸೂಚಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಆಮ್ ಆದ್ಮಿ ಪಕ್ಷವು ಒತ್ತಾಯಿಸಿದೆ.