ಕೊರೊನಾಕ್ಕೆ ಚಿಕಿತ್ಸೆ ನೀಡಿದ್ದಕ್ಕೆ ಮನೆಯಿಂದ ಹೊರಗೆ ಬಂದ ವೈದ್ಯರಿಗೆ ಆಶ್ರಯ
ಬೆಂಗಳೂರು, ಏಪ್ರಿಲ್ 2: ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅನೇಕ ವೈದ್ಯರು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಕೊರೊನಾಕ್ಕೆ ಹೆದರಿ ಕೆಲ ಮನೆ ಮಾಲಿಕರು ಬಾಡಿಗೆ ಮನೆಯಲ್ಲಿ ಇರುವ ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಮನೆ ತೆರವು ಮಾಡಲು ಒತ್ತಾಯಿಸುತ್ತಿದ್ದಾರೆ.
ಇದೇ ರೀತಿ ಬಾಡಿಗೆ ಮನೆ ತೊರೆದು ಬಂದ ಎಂಟು ವೈದ್ಯರಿಗೆ ನಮ್ಮ ಬೆಂಗಳೂರು ಫೌಂಡೇಶನ್ (ಎನ್ಬಿಎಫ್) ಸಹಾಯಹಸ್ತ ಚಾಚಿದೆ. 8 ಮಂದಿಯನ್ನು ಸದ್ಯಕ್ಕೆ ಹೋಟೆಲ್ ಡಿ-ಓರಿಯಲ್ಗೆ ಸ್ಥಳಾಂತರಿಸಲು ಎನ್ಬಿಎಫ್ ಕ್ರಮ ಕೈಗೊಂಡಿದೆ. ಈ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ.
ನಮ್ಮ ಬೆಂಗಳೂರು ಫೌಂಡೇಶನ್ ಮುಖ್ಯವಾಗಿ ಕೋವಿಡ್ ಲಾಕ್ಡೌನ್ ನಂತರ ಅಸಂಘಟಿತ ವಲಯದ ಕಾರ್ಮಿಕರು, ಉದ್ಯೋಗ ಕಳೆದುಕೊಂಡವರು, ಆಹಾರಕ್ಕೆ ಪರದಾಡುತ್ತಿದ್ದ ಬಡವರ ಸಮಸ್ಯೆಗಳನ್ನು ಪರಿಹರಿಸಲು 'ಎನ್ಬಿಎಫ್ ಫುಡ್ ಡೆಲಿವರಿ ಡ್ರೈವ್' ಅನ್ನು ಪ್ರಾರಂಭಿಸಿತು. ಆದರೆ, ಈಗ ವೈದ್ಯಕೀಯ ಭ್ರಾತೃತ್ವಕ್ಕೆ ಸಹಾಯ ಮಾಡಲು ಹೆಜ್ಜೆ ಹಾಕಿದೆ.

ಇಲ್ಲಿಯವರೆಗೆ ಎನ್ಬಿಎಫ್ 8305 ಜನರಿಗೆ ಆಹಾರ ಪ್ಯಾಕೆಟ್ಗಳು ಮತ್ತು ದಿನಸಿ ಕಿಟ್ಗಳನ್ನು ತಲುಪಿಸಿದೆ, ಇದರಲ್ಲಿ ದೈನಂದಿನ ಕೂಲಿ ಕಾರ್ಮಿಕರು, ನಿರಾಶ್ರಿತರು, ಭಿಕ್ಷುಕರು, ಕೊಳೆಗೇರಿ ನಿವಾಸಿಗಳು, ಕಡಿಮೆ ಆದಾಯದ ಗುಂಪುಗಳು ಮತ್ತು ಬೆಂಗಳೂರಿನಾದ್ಯಂತ ಏಕಾಂಗಿಯಾಗಿ ವಾಸಿಸುವ ಹಿರಿಯರಿಗೆ (ದೊಮ್ಮಲೂರು ವೈಯಾಲಿಕಾವಲ್, ಹನುಮಂತನಗರ, ಕೆ.ಜಿ.ಹಳ್ಳಿ, ನಾಗವಾರ, ಹೆಬ್ಬಾಳ ಮುಂತಾದ ಕಡೆ ಕೊಳೆಗೇರಿ ಮತ್ತು ಶೆಡ್ ಗಳಲ್ಲಿ ವಾಸಿಸುವವರು) ಆಹಾರ ಪದಾರ್ಥಗಳನ್ನು ತಲುಪಿಸಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಅವರು ಈ ಬಗ್ಗೆ ಮಾತನಾಡಿ, 'ಬಡಕುಟುಂಬಗಳಿಗೆ ಮತ್ತು ಮಕ್ಕಳಿಗೆ ದಿನಸಿ ಕಿಟ್ಗಳು ಮತ್ತು ಆಹಾರ ಪ್ಯಾಕೆಟ್ಗಳನ್ನು ಒದಗಿಸಲು ನಾವು ಹಣ ಮತ್ತು ಸ್ವಯಂಸೇವಕರನ್ನು ನಿರೀಕ್ಷಿಸುತ್ತಿದ್ದೇವೆ.
ಬಹಳಷ್ಟು ಜನರ ಬೆಂಬಲವಿಲ್ಲದೆ ಈ ಕಾರ್ಯ ಅಸಾಧ್ಯ. ಸಂಸದ ರಾಜೀವ್ ಚಂದ್ರಶೇಖರ್, ಸುವರ್ಣ ನ್ಯೂಸ್, ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿಐಟಿಒ), ಆಟ್ರಿಯಾ ಫೌಂಡೇಶನ್, ಭದ್ವಾಡ್ ಭಾವ, ದೇಸಿ ಮಸಾಲಾ, ಭಾಸ್ಕರ್ ಅವರ ಮಾನೆ ಹೋಲಿಗೆ, ಪ್ರೆಸ್ಟೀಜ್ ಗುಲ್ಮೋಹರ್ ಮತ್ತು ಹಲಸೂರಿನ ಗುರುದ್ವಾರದ ನಿವಾಸಿಗಳು, ಸ್ಲಂಗಳಲ್ಲಿ ಸಕ್ರಯವಾಗಿ ಕಾರ್ಯನಿರ್ವಹಿಸುತ್ತಿರುವ ಗಿಲ್ಗಾಲ್ ಚಾರಿಟೇಬಲ್ ಟ್ರಸ್ಟ್, ಮತ್ತು ಇತರರು ಕೈಜೋಡಿಸಿದ್ದಾರೆ' ಎಂದು ಹೇಳಿದರು.












Click it and Unblock the Notifications