ಆತ್ಮಹತ್ಯೆಗೆ ಶರಣಾದ ಕಾನ್ಸ್ಟೇಬಲ್: ದೇಹ ಪತ್ತೆಗಾಗಿ 250 ಸಿಸಿಟಿವಿ ಕ್ಯಾಮರಾ ಪರಿಶೀಲನೆ!
ಬೆಂಗಳೂರು ಜುಲೈ 2: ಮಡಿವಾಳ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದು ಅವರ ದೇಹವನ್ನು ಪತ್ತೆ ಮಾಡಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಅವರ ದೇಹ ಪತ್ತೆಗಾಗಿ ಒರೋಬ್ಬರಿ 250 ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿರುವುದು ಗೊತ್ತಾಗಿದೆ.
ಮಡಿವಾಳ ಪೊಲೀಸ್ ಕಾನ್ಸ್ಟೇಬಲ್ ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಶಿವರಾಜ್ಗಾಗಿ ಪೊಲೀಸರು ಹುಟುಕಾಟ ನಡೆಸಿದ್ದರು. ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್ ಅವರನ್ನು ಹುಡುಕಲಾಗುತ್ತಿತ್ತು. ಅವರ ಪತ್ತೆಗಾಗಿ ಹಲವಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದೆ.

ಸತತ ಐದು ದಿನಗಳ ಹುಟುಕಾಟದ ಬಳಿಕವಷ್ಟೇ ಶಿವರಾಜ್ ಅವರ ಮೃತದೇಹ ಪತ್ತೆಯಾಗಿದೆ. ಮೆಟ್ರೋ ಸ್ಟೇಷನ್ ಬಳಿ ಬೈಕ್ ಪಾರ್ಕಿಂಗ್ ಮಾಡಿದ್ದ ಶಿವರಾಜ್ ಅವರು ಬಳಿಕ ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಾಗಿರಲಿಲ್ಲ. ವಾಟರ್ ಬಾಟಲ್ ಹಿಡಿದು ವಿವಿ ಒಳಗೆ ಹೋಗಿರುವುದು ಮಾತ್ರ ಗೊತ್ತಾಗಿತ್ತು.
ಇದೊಂದೇ ಆಧಾರದ ಮೇಲೆ ಆ ಭಾಗದ ಸುತ್ತಮುತ್ತಲಿನ ಸಿಸಿಟಿವಿ ಕಾಮೆರಾಗಳನ್ನು ಪರಿಶೀಲನೆ ಮಾಡಲಾಗಿದೆ. ಸುಬ್ರಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ಸ್ಟೇಷನ್ವರೆಗೂ ಸಿಸಿಟಿವಿ ಪರಿಶೀಲನೆ ಮಾಡಲಾಗಿತ್ತು. ಆದರೆ ಎಲ್ಲೂ ಕೂಡ ಅವರು ಪತ್ತೆಯಾಗಿರಲಿಲ್ಲ.
ಕೊನೆಗೆ ಬೆಂಗಳೂರು ವಿವಿ ಆವರಣದೊಳಗೆ ಇರುವ ಪಾಳು ಬಿದ್ದ ಬಾವಿಯಲ್ಲಿ ಅವರ ಮೃತ ದೇಹ ತೇಲುತ್ತಿರುವುದು ಕಂಡುಬಂದಿದೆ. ಬಳಿಕ ಅವರ ದೇಹವನ್ನು ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಶಿವರಾಜ್ ಒಬ್ಬರೇ ಬೆಂಗಳೂರು ವಿವಿಯೊಳಗೆ ನಡೆದುಕೊಂಡು ಹೋಗಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಹೀಗಾಗಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಿವರಾಜ್ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಎನ್ನುವ ನಿರ್ಧಾರಕ್ಕೆ ಪೊಲಿಸರು ಬಂದಿದ್ದಾರೆ.
ಶಿವರಾಜ್ ಆತ್ಮಹತ್ಯಗೆ ಕಾರಣವೇನು?
ಶಿವರಾಜ್ ಅವರು ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿ ದೂರವಾಗಿದ್ದರು. ಕೌಟುಂಬ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅನುಮಾನಿಸಲಾಗಿದೆ. ಯಾಕೆಂದರೆ ಮೂರು ತಿಂಗಳ ಹಿಂದಷ್ಟೇ ಶಿವರಾಜ್, ವಾಣಿ ಎಂಬಾಕೆಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿ ಪತಿಯಿಂದ ದೂರವಾಗಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶಿವರಾಜ್ ಹಾಗೂ ಕುಟುಂಬದವರ ವಿರುದ್ಧ ವಾಣಿ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿದ ಬಳಿಕ ಮೇಲಿಂದ ಮೇಲೆ ಬೆದರಿಕೆ ಹಾಕಿದ್ದಳು. ಕರ್ತವ್ಯಕ್ಕೆ ಹೊರಟ ಶಿವರಾಜ್ ನಾಪತ್ತೆಯಾಗಿದ್ದ, ಪತ್ನಿ ವಾಣಿ ಕಿರುಕುಳದಿಂದ ಬೇಸತ್ತು ಹೋಗಿದ್ದ ಎಂದು ಶಿವರಾಜ್ ಸಹೋದರ ದೂರಿನಲ್ಲಿ ಉಲ್ಲೇಖಿಸಿದ್ದರು.
ಹೀಗೆ ನಾಪತ್ತೆಯಾದ ಕಾನ್ಸ್ಸ್ಟೇಬಲ್ ಶವವಾಗಿ ಪತ್ತೆಯಾಗಿದ್ದಾರೆ. ಶವ ಪತ್ತೆಯಾಗುತ್ತುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಳು ಬಾವಿಯಲ್ಲಿ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.












Click it and Unblock the Notifications