ಬಿಎಸ್ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ
Recommended Video

ಬೆಂಗಳೂರು, ಸೆಪ್ಟೆಂಬರ್ 20: ಕಾಂಗ್ರೆಸ್ನ ಕಾರ್ಯಕರ್ತರು ಹಠಾತ್ತನೆ ಇಂದು ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದ ಮುಂದೆ ಪ್ರತಿಭಟನೆ ಮಾಡಿದರು. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಹಲವು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಯಡಿಯೂರಪ್ಪ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರನ್ನು ತಡೆಯುವ ಯತ್ನ ಮಾಡಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸಲ್ಲಿದ್ದ ಬಿಜೆಪಿಯ ಶಾಸಕರಾದ ರೇಣುಕಾಚಾರ್ಯ, ವಿಶ್ವನಾಥ, ರವಿಕುಮಾರ್ ಹಾಗೂ ಇನ್ನು ಕೆಲವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ನಡುವೆ ನೂಕಾಟ-ತಳ್ಳಾಟ ಸಹ ನಡೆಯಿತು.

ಕಾಂಗ್ರೆಸ್ ಗೂಂಡಾಗಳನ್ನು ಕಳುಹಿಸಿ ಧಂಗೆ ಎಬ್ಬಿಸುವ ಕೆಲಸ ಮಾಡಿದೆ ಎಂದು ಶಾಸಕ ರೇಣುಕಾಚಾರ್ಯ ಮಾಧ್ಯಮಗಳಿಗೆ ಹೇಳಿದರು. ಮುಂದುವರೆದು, ಕಾಂಗ್ರೆಸ್ ಗೂಂಡಾಗಿರಿ ಮುಂದುವರೆದರೆ ನಾವು ಕೈಕಟ್ಟಿ ಕೂರುವುದಿಲ್ಲ 'ಸ್ನೇಹಕ್ಕೆ ಬದ್ಧ ಸಮರಕ್ಕೆ ಸಿದ್ಧ' ಎಂದು ಘೋಷಿಸಿದರು.
ಸ್ಥಳದಲ್ಲಿ ಹಾಜರಿದ್ದ ಬಿಜೆಪಿ ಶಾಸಕ ವಿಶ್ವನಾಥ ಅವರು ಮಾತನಾಡಿ, 'ಕುಮಾರಸ್ವಾಮಿ ಅವರು ಮಧ್ಯಾಹ್ನ ನಾನೇ ಧಂಗೆ ಏಳಲು ಕರೆ ನೀಡುತ್ತೇನೆ' ಎಂದು ಹೇಳಿಕೆ ಕೊಟ್ಟಿರುವ ಬೆನ್ನಲ್ಲೆ ಹೀಗೆ ನಡೆದಿದೆ. ಇದು ಸರ್ಕಾರವೇ ಗೂಂಡಾಗಿರಿ ಮಾಡಲು ಪ್ರೇರೇಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಯಡಿಯೂರಪ್ಪ ಅವರ ನಿವಾಸದ ಬಳಿ ಈಗ ಬಿಗುವಿನ ವಾತಾವರಣ ಇದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿಯ ಹಲವು ಕಾರ್ಯಕರ್ತರು ಸಹ ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಅಲ್ಲಿಂದ ಕಳಿಸುವ ಯತ್ನ ಮಾಡಲಾಗುತ್ತಿದೆ.












Click it and Unblock the Notifications