ಐಎಂಎ ಪ್ರಕರಣ: ಎಸ್ಐಟಿಯಿಂದ 3 ಗಂಟೆ ಜಮೀರ್ ವಿಚಾರಣೆ
ಬೆಂಗಳೂರು, ಜುಲೈ 31: ಐಎಂಎ ಹಗರಣ ತನಿಕೆ ನಡೆಸುತ್ತಿರುವ ಎಸ್ಐಟಿ ತಂಡವು ಇಂದು ಶಾಸಕ ಜಮೀರ್ ಅಹ್ಮದ್ ಅವರನ್ನು ವಿಚಾರಣೆಗೆ ಒಳಪಡಿಸಿತು.
ಈ ಹಿಂದೆಯೇ ಜಮೀರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಎಸ್ಐಟಿ ನೊಟೀಸ್ ನೀಡಿತ್ತು. ಆದರೆ ವಿಧಾನಸಭೆ ಕಲಾಪ ಇದ್ದ ಕಾರಣ ಗಡುವು ನೀಡುವಂತೆ ಜಮೀರ್ ಅವರು ಮನವಿ ಮಾಡಿದ್ದರು, ಅಂತೆಯೇ ಗಡುವು ಮುಗಿದ ನಂತರ ಈಗ ಜಮೀರ್ ಅವರು ಎಸ್ಐಟಿ ಮುಂದೆ ಹಾಜರಾದರು.
ಎಸ್ಐಟಿ ತಂಡದ ನೇತೃತ್ವ ವಹಿಸಿರುವ ರವಿಕಾಂತೇಗೌಡ ಅವರು, ಸತತ ಮೂರು ಗಂಟೆ ಕಾಲ ಜಮೀರ್ ಅಹ್ಮದ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಸಹ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಅವರೊಂದಿಗೆ ಹಣಕಾಸಿನ ಸಂಬಂಧ ಇಟ್ಟುಕೊಂಡಿದ್ದಾರೆಂಬ ಆರೋಪ ಜಮೀರ್ ಅಹ್ಮದ್ ವಿರುದ್ಧ ಎದ್ದಿತ್ತು.
ಆಗ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದ ಜಮೀರ್ ಅಹ್ಮದ್, ತಾವು ಸೈಟೊಂದನ್ನು ಮನ್ಸೂರ್ ಖಾನ್ ಅವರಿಗೆ ಮಾರಾಟ ಮಾಡಿ ಹಣ ಪಡೆದಿದ್ದಾಗಿ ಹೇಳಿದ್ದರು. ಆ ನಂತರ ತಮಗೂ ಅವರಿಗೂ ಇನ್ನಾವುದೇ ಸಂಬಂಧ ಇಲ್ಲವೆಂದು ಜಮೀರ್ ಅವರು ಹೇಳಿದ್ದರು.
ಐಎಂಎ ಹಗರಣದಲ್ಲಿ ಈಗಾಗಲೇ ರೋಷನ್ ಬೇಗ್ ಅವರನ್ನು ಎಸ್ಐಟಿಯು ವಿಚಾರಣೆ ನಡೆಸಿದೆ. ಐಎಎಸ್ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇಡಿ ವಶದಲ್ಲಿರುವ ಆರೋಪಿ ಮನ್ಸೂರ್ ಖಾನ್, ಈಗಾಗಲೇ ಕೆಲವು ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳ ಹೆಸರನ್ನು ಬಾಯಿ ಬಿಟ್ಟಿದ್ದಾಣೆ ಎನ್ನಲಾಗುತ್ತಿದ್ದು, ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.












Click it and Unblock the Notifications