ಕಾಂಗ್ರೆಸ್ ಪಕ್ಷ ನಾಶವಾಗುತ್ತದೆ ಎಂದ ಕಾಂಗ್ರೆಸ್ ಶಾಸಕ ಸುಧಾಕರ್
ಬೆಂಗಳೂರು, ಜೂನ್ 07: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ನಾಶವಾಗಿ ಹೋಗುತ್ತದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಗುಟುರು ಹಾಕಿದ್ದಾರೆ.
ಎಂಬಿ ಪಾಟೀಲ್ ಅವರ ನಿವಾಸದಲ್ಲಿ ಅತೃಪ್ತ ಶಾಸಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಕ್ಕಲಿಗರನ್ನು ಜೆಡಿಎಸ್ ಪಕ್ಷ ಗುತ್ತಿಗೆ ಏನಾದರೂ ಪಡೆದುಕೊಂಡಿದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಒಕ್ಕಲಿಗರಾಗಿರುವ ಸುಧಾಕರ್ ಅವರು ಕಳೆದ ಬಾರಿಯ ಸರ್ಕಾರದಲ್ಲಿ ಸಂಪುಟ ಪುನರ್ರಚನೆ ಆದಾಗಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಆದರೆ ಆಗ ಸಚಿವ ಸ್ಥಾನ ಸಿಕ್ಕಿರಲಿಲ್ಲ ಹಾಗಾಗಿ ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದೇ ಎಣಿಸಲಾಗಿತ್ತು ಆದರೆ ಈ ಬಾರಿಯೂ ಸ್ಥಾನ ಕೈತಪ್ಪಿದೆ.

ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಸುಧಾಕರ್ ಅವರು, 'ರಾಹುಲ್ ಗಾಂಧಿ ಅವರನ್ನು ನೋಡಿ ರಾಜಕೀಯಕ್ಕೆ ಬಂದೆ, ಸಿದ್ದರಾಮಯ್ಯ ಅವರೂ ಕೂಡ ಉತ್ತಮ ಆಡಳಿತ ಕೊಟ್ಟಿದ್ದರು ಆದರೆ ಇಂದು ಅವರನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ' ಎಂದು ಅಸಮಾಧಾನ ಹೊರಹಾಕಿದರು.
ಪಕ್ಷ ಬಿಡುವ ಸೂಚನೆಯನ್ನೂ ನೀಡಿದ ಸುಧಾಕರ್ ಅವರು, 'ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ' ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸುಧಾಕರ್ ಅವರು ಎರಡು ಬಾರಿ ಗೆದ್ದಿದ್ದಾರೆ.












Click it and Unblock the Notifications