ವಿಪಕ್ಷ ನಾಯಕನ ಕಗ್ಗಂಟಿಗೆ ಪರಿಹಾರ ಹುಡುಕಲು ಕಾಂಗ್ರೆಸ್ ಯತ್ನ
ಬೆಂಗಳೂರು, ಅಕ್ಟೋಬರ್ 5: ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಗೊಂದಲ ಏರ್ಪಟ್ಟಿದೆ. ಕಾಂಗ್ರೆಸ್ ಹಿರಿಯ ನಾಯಕರು ನಾಮುಂದೆ ತಾ ಮುಂದು ಎಂದು ವಿಪಕ್ಷ ನಾಯಕರಾಗಲು ಕಾಯುತ್ತಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ವಿಚಾರ ವೀಕ್ಷಕರನ್ನು ಕಳುಹಿಸಿಕೊಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಶನಿವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಭಾನುವಾರ ಹಿರಿಯ ಕಾಂಗ್ರೆಸ್ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ವಿಪಕ್ಷ ನಾಯಕ ಆಗುವ ಸಿದ್ದರಾಮಯ್ಯ ಕನಸಿಗೆ ಸ್ವಪಕ್ಷೀಯರಿಂದ ಅಡ್ಡಗಾಲು
ಯಾರು ಪಕ್ಷ ಸಂಘಟನೆ ಮಾಡಲಿದ್ದಾರೆ. ಸರ್ಕಾರದ ವಿರುದ್ಧ ರಚನಾತ್ಮಕವಾಗಿ ಹೋರಾಟ ರೂಪಿಸಬಲ್ಲ ನಾಯಕ ಯಾರು? ವಿಪಕ್ಷ ಸ್ಥಾನಕ್ಕೆ ಎಷ್ಟು ಮಂದಿ ಆಕಾಂಕ್ಷಿಗಳು? ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮತ್ತೆ ವಿಪಕ್ಷ ನಾಯಕರನ್ನಾಗಿ ಮಾಡಬೇಕಾ? ಹೊಸಬರಿಗೆ ಅವಕಾಶ ನೀಡಬೇಕಾ? ಎನ್ನುವ ವಿಚಾರದ ಸುತ್ತಲೇ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ವಿಪಕ್ಷ ನಾಯಕರ ರೇಸ್ನಲ್ಲಿರೋ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವೇನು? ಒಟ್ಟಾರೆ ಕಾಂಗ್ರೆಸ್ ನಾಯಕರ ಒಲವು ಯಾರ ಮೇಲಿದೆ ಎಂಬ ಬಗ್ಗೆಯೂ ಚರ್ಚೆಯಾಗಲಿದೆ. ಮಧುಸೂದನ್ ಪ್ರತಿಯೊಬ್ಬರ ಬಳಿಯೂ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ವಿಪಕ್ಷ ಸ್ಥಾನದ ರೇಸ್ನಲ್ಲಿರುವ ಬಗ್ಗೆ ಅಭಿಪ್ರಾಯ ಕೇಳಲಿದ್ದಾರೆ ಎನ್ನಲಾಗುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ನೀಡಲಿದ್ಧಾರೆ. ಬಳಿಕ ರಾಜ್ಯ ನಾಯಕರ ಅಭಿಪ್ರಾಯದ ಮೇರೆಗೆ ಹೈಕಮಾಂಡ್ ಅಧಿವೇಶನಕ್ಕೆ ಮುನ್ನವೇ ಕಾಂಗ್ರೆಸ್ ವಿಪಕ್ಷ ನಾಯಕನ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.