ಕಾಂಗ್ರೆಸ್ ಅಸ್ತಿತ್ವ ಸೂರ್ಯ, ಚಂದ್ರ ಇರುವವರೆಗೆ
ಬೆಂಗಳೂರು, ಜ. 3: 'ಕಾಂಗ್ರೆಸ್ ಮುಕ್ತ ಕರ್ನಾಟಕ'ಕ್ಕೆ ಕರೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.
"ಸೂರ್ಯ ಚಂದ್ರ ಇರುವವರೆಗೂ ಕಾಂಗ್ರೆಸ್ ಅಸ್ತಿತ್ವದಲ್ಲಿರುತ್ತದೆ. ಚುನಾವಣೆಯನ್ನು ಮಾರುಕಟ್ಟೆ ಮಾಡಿ ಬಿಜೆಪಿ ಅಧಿಕಾರ ಹಿಡಿದಿದೆ" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಭವ್ಯ ಇತಿಹಾಸ ಹೊಂದಿದ ಪಕ್ಷ" ಎಂದು ಸಮರ್ಥಿಸಿಕೊಂಡರು. [ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿ]
"ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ಕಿ, ಬೇಳೆ, ರಾಗಿ ಬೆಲೆಯನ್ನು ಕಡಿಮೆ ಮಾಡಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಇನ್ನಷ್ಟು ಏರಿದೆ. ಬದ್ಧತೆ ಇದ್ದರೆ ಇವುಗಳ ಬೆಲೆ ಕಡಿಮೆ ಮಾಡಿ" ಎಂದು ಸವಾಲು ಹಾಕಿದರು.
"ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಬಿಜೆಪಿ ಸರ್ಕಾರ ಕಾರಣವಲ್ಲ" ಎಂದು ಸ್ಪಷ್ಟಪಡಿಸಿದರು.
130 ವರ್ಷಗಳ ಇತಿಹಾಸವಿದೆ : "ಕಾಂಗ್ರೆಸ್ಗೆ 130 ವರ್ಷಗಳ ಇತಿಹಾಸವಿದೆ. ಆದ್ದರಿಂದ ಕರ್ನಾಟಕ ಕಾಂಗ್ರೆಸ್ ಮುಕ್ತವಾಗುವುದು ಸಾಧ್ಯವಿಲ್ಲದ ಮಾತು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಹೇಳಿದರು. [ಬೆಂಗಳೂರಿನಲ್ಲಿ ಚಾಣಾಕ್ಷ ಅಮಿತ್ ಶಾ]
ಕರ್ನಾಟಕದಲ್ಲಿ ಅಸಾಧ್ಯ : "ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಕರ್ನಾಟಕದಲ್ಲಿ ಸಾಧ್ಯವಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
"ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದಲೇ ಅಧಿಕಾರ ಕಳೆದುಕೊಂಡಿದ್ದನ್ನು ಮರೆತಿದೆ" ಎಂದು ಲೇವಡಿ ಮಾಡಿದರು.