ಆರ್.ಆರ್. ನಗರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆದ್ದ ಮುನಿರತ್ನ
ಬೆಂಗಳೂರು, ಮೇ 31 : ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಗೆಲುವು ಸಾಧಿಸಿದ್ದಾರೆ. 25,492 ಮತಗಳ ಅಂತರದಿಂದ ಅವರು ಗೆದ್ದ, 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಗುರುವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೇ ಕಾಂಗ್ರೆಸ್ನ ಮುನಿರತ್ನ ಅವರು ಮುನ್ನಡೆ ಕಾಯ್ದುಕೊಂಡರು. ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಅವರು ಹಿನ್ನಡೆ ಅನುಭವಿಸಿದರು.
ಮೇ 28ರ ಸೋಮವಾರ ರಾಜರಾಜೇಶ್ವರ ನಗರ ಕ್ಷೇತ್ರದ ಚುನಾವಣೆ ನಡೆದಿತ್ತು. ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಕಾಂಗ್ರೆಸ್ನ ಮುನಿರತ್ನ ಅವರು 25 ಸಾವಿರ ಮತಗಳ ಅಂತರದಿಂದ ಗೆದ್ದು, ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಚುನಾವಣೆ ಇದಾಗಿದೆ. ಆದ್ದರಿಂದ, ಈ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು. ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯಲ್ಲಿ ಶಾಸಕರ ಬಲ ಹೆಚ್ಚಿಸಿಕೊಳ್ಳುವ ಬಿಜೆಪಿ ಕನಸಿಗೆ ಇದರಿಂದ ಅಡ್ಡಿಯಾಗಿದೆ.
ಪಡೆದ ಮತಗಳು
* ಕಾಂಗ್ರಸ್ (ಮುನಿರತ್ನ) : 108064
* ಬಿಜೆಪಿ (ಮುನಿರಾಜು) : 82,572
* ಜೆಡಿಎಸ್ (ಜಿ.ಎಚ್.ರಾಮಚಂದ್ರ) : 60,360












Click it and Unblock the Notifications