ರಸ್ತೆ ಅಭಿವೃದ್ಧಿ ಹೆಸರಲ್ಲಿ ₹46,300 ಕೋಟಿ ದುರ್ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ, 'ED'ಗೆ ದೂರು
ಬೆಂಗಳೂರು, ನವೆಂಬರ್ 26: ಬೆಂಗಳೂರಿನ ರಸ್ತೆ ಕಾಮಗಾರಿಗಳ ಅಭಿವೃದ್ಧಿಗೆಂದು ರಾಜ್ಯ ಸರ್ಕಾರ 46,300 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅಷ್ಟು ಹಣ ದುರುಪಯೋಗವಾಗಿದೆ ಎಂದು ಐಎಎಸ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಜಾರಿ ನಿರ್ದೇಶನಾಲಯಕ್ಕೆ (ED) ದೂರು ಕೊಟ್ಟಿದ್ದಾರೆ. ಈ ವಿಚಾರ ರಾಜ್ಯ ಸರ್ಕಾರದ ಮೇಲೆ ಮತ್ತೊಂದು ಅಕ್ರಮದ ಅನುಮಾನ ಹುಟ್ಟುವಂತೆ ಮಾಡಿದೆ.
ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ರಮೇಶ್ ಎನ್ ಆರ್ ಅವರು ಅವರು ಜಾರಿ ನಿದೇಶನಾಲಯಕ್ಕೆ ಭ್ರಷ್ಟಾಚಾರ ನಡೆದಿದೆ. ಅಭಿವೃದ್ಧಿಯ 46,300 ಕೋಟಿ ರೂಪಾಯಿ ಹಣ ದುರುಪಯೋಗ ಆಗಿದೆ ಎಂದು 9 ಮಂದಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದೂರು ಪತ್ರ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಸ್ತೆ ಅಭಿವೃದ್ಧಿ ಕಾಮಗಾರಿಗೆ 2013 ಮತ್ತು 2023-24ರ ನಡುವೆ I 46,300 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿತ್ತು ಎಂದು ಅವರು ದೂರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಈ ಆರೋಪ ನಿಜವೇ ಆದಲ್ಲಿ ಮುಡಾ ಅಕ್ರಮ, ವಾಲ್ಮಿಕಿ ಹಗರಣದಂತಹ ಭ್ರಷ್ಟಾಚಾರ ಆರೋಪ ಎದುರಿಸಿದ್ದ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಲಿದೆ. ವಿಪಕ್ಷಗಳು ಮತ್ತೆ ಸರ್ಕಾರದ ಮೇಲೆ ಮುಗಿಬೀಳಲಿವೆ.
ಡಿಸೆಂಬರ್ ಎರಡನೇ ವಾರದಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಶುರುವಾಗಲಿದೆ. ಇದೇ ಭ್ರಷ್ಟಾಚಾರ, ಅಕ್ರಮ ವಿಷಯಗಳನ್ನು ಇಟ್ಟುಕೊಂಡು ಬಿಜೆಪಿ- ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications