ಬೆಂಗಳೂರಲ್ಲಿ ಕೊರೆವ ಚಳಿ, ರೋಗಗಳ ಭೀತಿ, ಸಲಹೆಗಳು
ಬೆಂಗಳೂರು, ನವೆಂಬರ್ 2: ನೈಋತ್ಯ ಮುಂಗಾರು ರಾಜ್ಯಕ್ಕೆ ಪ್ರವೇಶಿಸುವ ಮುನ್ನ ಆಗಾಗ ಬೆಂಗಳೂರಲ್ಲಿ ಸ್ವಲ್ಪ ಮಳೆಯಾಗಿತ್ತು, ಮುಂಗಾರು ಪ್ರವೇಶಿಸಿದ ಬಳಿಕ ಮಳೆಯೇ ಕಣ್ಮರೆಯಾಗಿದ್ದು, ದಟ್ಟ ಮೋಡ ಕವಿದುಕೊಂಡು ಕತ್ತಲನ್ನು ಮಾತ್ರ ನೀಡಿತ್ತು. ಇದೀಗ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಈಶಾನ್ಯ ಹಿಂಗಾರು ಆಗಮಿಸಿದೆ.
ಇದು ಕರ್ನಾಟಕಕ್ಕೆ ನೈಋತ್ಯ ಮುಂಗಾರು ಹೇಗೋ ತಮಿಳುನಾಡಿಗೆ ಈಶಾನ್ಯ ಮುಂಗಾರು ಹೆಚ್ಚು ಮಳೆಯನ್ನು ಹೊತ್ತುತರುವಂತದ್ದಾಗಿದೆ. ಹಾಗಾಗಿ ಪಾಂಡಿಚೇರಿ, ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿ ಇನ್ನು ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಹಾಗೆಯೇ ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗಿದೆ. ಈ ಈಶಾನ್ಯ ಮುಂಗಾರು ಕರ್ನಾಟಕದಲ್ಲಿ ಚಳಿಯನ್ನು ಹೆಚ್ಚಿಸಲಿದೆ. ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಅಸ್ತಮಾ ರೋಗಿಗಳಿಗೆ ಎಚ್ಚರಿಕೆ
ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಚಳಿಗಾಲದಲ್ಲಿ ಎಚ್ಚರ ವಹಿಸಬೇಕು, ವಿಷಪೂರಿತ ಗಾಳಿ ಉಸಿರಾಟದ ಮೂಲಕ ದೇಹದೊಳಗೆ ಧೂಳಿನ ಕಣಗಳನ್ನು ಹೊತ್ತೊಯ್ದರೆ ಅಸ್ತಮಾ ಹೆಚ್ಚಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ಕೈಕಾಲು ದೇಹ ತಣ್ಣಗಿರುವುದರಿಂದ ರಕ್ತ ಸಂಚಾರ ಅಷ್ಟು ಸಲೀಸಾಗಿ ಆಗುವುದಿಲ್ಲ ಇದು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಶಾಪವಾಗಿದೆ. ಹಾಗಾಗಿ ಆದಷ್ಟು ಬೆಚ್ಚನೆಯ ಉಡುಪು, ಮೈಬೆಚ್ಚಗಾಗುವಂತೆ ಆಗಾಗ ಬೆಚ್ಚಗಿನ ಶಾಖವನ್ನು ಕೊಟ್ಟುಕೊಳ್ಳುವುದು, ಬಿಸಿ ಆಹಾರ, ಪಾನೀಯಗಳನ್ನು ಸೇವಿಸಬೇಕಾಗಿದೆ.

ಚಳಿಯಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?
ಈ ಸಲದ ಚಳಿ ತುಂಬಾ ಜೋರಾಗಿಯೇ ಇದೆ, ಉಣ್ಣೆಯ ಬಟ್ಟೆಯನ್ನು ಧರಿಸುವುದು ಉತ್ತಮ, ಹೊರಗಡೆ ಹೋಗುವವರು ಮುಖಕ್ಕೆ ಮಾಸ್ಕ್ ಧರಿಸಿ ಹೋಗುವುದು ಸೂಕ್ತ, ಅದರಲ್ಲಿಯೂ ಬೆಂಗಳೂರಿನ ವಾತಾವರಣ ಕೂಡ ಅಷ್ಟು ಸರಿಯಿಲ್ಲದ ಕಾರಣ ಸಾಕಷ್ಟು ಭಾಗಗಳಲ್ಲಿ ವಿಷಪೂರಿತ ಗಾಳಿಯಿಂದಾಗಿ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇದೆ.

ವೃದ್ಧರು ಏನು ಮಾಡಬೇಕು?
ವಯಸ್ಸಾದವರು ಈ ದಿನಗಳಲ್ಲಿ ಬನಿಯನ್, ಅದರ ಮೇಲೊಂದು ಸ್ವೆಟರ್, ಅದರ ಮೇಲೊಂದು ತುಂಬುದೋಳಿನ ಅಂಗಿ ಹಾಕಿಕೊಂಡರೆ ಚಳಿಯಿಂದ ರಕ್ಷಣೆ ಸಿಗುತ್ತದೆ. ಮನೆಯಲ್ಲಿ ಒಲೆ ಇರುವವರು ರಾಥ್ರಿ ಮಲಗುವ ಮೊದಲು ಒಂದು ಹತ್ತು ನಿಮಿಷ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು, ಮಲಗಿದರೆ ಬೇಗ ನಿದ್ದೆ ಬರುತ್ತದೆ. ಹಾಗೆಯೇ ವಾಕಿಂಗ್ ಹೋಗುವವರು ಮುಖಕ್ಕೆ ಮಾಸ್ಕ್ ಧರಿಸುವುದು ಮರೆಯಬಾರದು.

ನಸುಕಿನಲ್ಲಿ ವಾಕಿಂಗ್ ಹೋಗುವವರು ಹೀಗೆ ಮಾಡಿ
ತೀರಾ ನಸುಕಿನಲ್ಲೇ ಎದ್ದು ವಾಕಿಂಗ್ಗೆ ಹೋಗುವ ಅಭ್ಯಾಸವಿರುವವರು ಮರೆಯದೆ ಟೋಪಿ, ಮಫ್ಲರ್ ಬಳಸುವುದು ಒಳ್ಳೆಯದು. ಏಕೆಂದರೆ, ಪೂರ್ವದಿಂದ ಬೀಸುವ ಶೀತಗಾಳಿಯು ಮುಂಜಾನೆ ನಾಲ್ಕು ಗಂಟೆಯ ನಂತರ ಪ್ರಬಲವಾಗಿರುತ್ತದೆ. ಕಿವಿಗಳ ಮೂಲಕ ಈ ಗಾಳಿ ನಮ್ಮ ದೇಹವನ್ನು ಪ್ರವೇಶಿಸಿದಾಗ ನೆಗಡಿ, ತಲೆಭಾರ, ತಲೆನೋವು ಉಂಟಾಗುತ್ತದೆ. ಕಿವಿಗಳಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಇವೆಲ್ಲದರಿಂದ ತಪ್ಪಿಸಿಕೊಳ್ಳಬಹುದು. ದ್ವಿಚಕ್ರ ವಾಹನ ಸವಾರರು ಕೂಡ ಮುಖಕವಚವಾಗಿ ಕೆಲಸ ಮಾಡುವಂಥ ಗಾಜಿರುವ ಹೆಲ್ಮೆಟ್ ಧರಿಸುವುದು ಒಳ್ಳೆಯದು.

ಸ್ನಾನಕ್ಕೆ ಸೋಪು ಬದಲು ಕಡಲೆಹಿಟ್ಟು ಬಳಸಿ
ಸ್ನಾನ ಮಾಡುವಾಗಲೂ ಅಷ್ಟೆ. ಮೈಗೆಲ್ಲ ಸೋಪನ್ನು ತಿಕ್ಕಬೇಡಿ. ಅದರ ಬದಲು ಹೆಸರುಹಿಟ್ಟು ಮತ್ತು ಕಡಲೆಹಿಟ್ಟನ್ನು ಹಾಕಿಕೊಳ್ಳುವುದು ಒಳ್ಳೆಯದು. ಇದರಿಂದ ಹಿತವಾದ ಅನುಭವವಾಗುತ್ತದೆ. ಇವೆರಡೂ ಹಿಟ್ಟನ್ನು ಬಿಗಿಯಾದ ಮುಚ್ಚಳವಿರುವ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಇದರಿಂದ ಹಿಟ್ಟು ಗಂಟಾಗುವುದು ತಪ್ಪುತ್ತದೆ.












Click it and Unblock the Notifications