ಯಡಿಯೂರಪ್ಪ ಮನೆಗೆ ಬಂದವರು ಮಾತ್ರ ದಲಿತರಾ: ಸಿಎಂ ಪ್ರಶ್ನೆ
ದಲಿತರೊಟ್ಟಿಗೆ ಊಟ ಮಾಡುವ ಸವಾಲೆಸೆದಿದ್ದ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ತಿರುಗೇಟು. ನಾವು ನಿತ್ಯವೂ ದಲಿತರ ಮನೆಯಲ್ಲೇ ಊಟ ಮಾಡುತ್ತೇವೆ ಎಂದ ಸಿಎಂ.
ಬೆಂಗಳೂರು, ಆಗಸ್ಟ್ 29: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದವರು ಮಾತ್ರ ದಲಿತರಾ, ಉಳಿದವರು ದಲಿತರಲ್ಲವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದಲಿತ ಕುಟುಂಬಗಳಿಗೆ ಊಟ ಬಡಿಸಿ ಪ್ರತಿ- ಆತಿಥ್ಯ ನೀಡಿದ ಬಿಎಸ್ ವೈ
ಇತ್ತೀಚೆಗೆ, ಬಿಜೆಪಿ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ ಅವರು, ವಿವಿಧ ಜಿಲ್ಲೆಗಳಲ್ಲಿ ದಲಿತರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದರು.
ಆ ಎಲ್ಲಾ ದಲಿತ ಕುಟುಂಬಗಳನ್ನು ಆಗಸ್ಟ್ 28ರಂದು ತಮ್ಮ ಮನೆಗೆ ಆಹ್ವಾನಿಸಿದ್ದ ಯಡಿಯೂರಪ್ಪ ಎಲ್ಲರಿಗೂ ಆತಿಥ್ಯ ನೀಡಿದ್ದರು. ತಾವೂ ಅವರ ಜತೆಯಲ್ಲೇ ಊಟ ಮಾಡಿದ್ದರು. ಆ ಮೂಲಕ, ಕಾಂಗ್ರೆಸ್ ನಾಯಕರಿಗೆ ಸವಾಲು ಎಸೆದಿದ್ದ ಬಿಎಸ್ ವೈ, ಕಾಂಗ್ರೆಸ್ ನಾಯಕರೂ ತಮ್ಮ ಮನೆಗೆ ಹೀಗೆ ದಲಿತರನ್ನು ಕರೆಸಿ ಊಟ ತಿಂಡಿ ಮಾಡಲಿ ಎಂದಿದ್ದರು.
ನಾಳೆ ಯಡಿಯೂರಪ್ಪ ರಾಜಕೀಯ ಭವಿಷ್ಯ ನಿರ್ಧಾರ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ''ಯಡಿಯೂರಪ್ಪ ಅವರ ಮನೆಗೆ ಬಂದವರು ಮಾತ್ರ ದಲಿತರಾ ಎಂದು ಪ್ರಶ್ನಿಸಿದ್ದಲ್ಲದೆ, ನಾವು ನಿತ್ಯವೂ ದಲಿತರ ಮನೆಯಲ್ಲೇ ಊಟ ಮಾಡುತ್ತಲೇ ಇದ್ದೇವೆ. ಯಾವತ್ತೋ ಒಂದು ದಿನ ಊಟ ಮಾಡಿದ ಮಾತ್ರಕ್ಕೆ ಸವಾಲೆಸೆದಿದ್ದಾರೆ'' ಎಂದು ಹಾಸ್ಯ ಮಾಡಿದರು.