ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ
ಬೆಂಗಳೂರು, ಜೂನ್ 3: ಸಾಲು ಮರಗಳ ಉಳಿವಿನ ಕುರಿತು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಮನವಿಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬಾಗೇಪಲ್ಲಿ- ಹಲಗೂರು ಮಾರ್ಗದಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯಲು ಮುಂದಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳು, ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ರಸ್ತೆಯ ಮಾರ್ಗವನ್ನು ಬದಲಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಗ್ರಾಮದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ಸಲ್ಲಿಸಿದರು.

ಕುದೂರು ಗ್ರಾಮದಿಂದ ಹುಲಿಕಲ್ ಗ್ರಾಮದವರೆಗಿನ ನಾಲ್ಕು ಕಿ.ಮೀ ದೂರದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ತಿಮ್ಮಕ್ಕ ಅವರು ಬೆಳೆಸಿರುವ ಆಲದ ಮರಗಳು ಬಿಸಿಲು ಕೆಳಗೆ ಬೀಳದಂತೆ ಒಂದನ್ನೊಂದು ಬೆಸೆದುಕೊಂಡಿವೆ. ಇಲ್ಲಿನ ಒಂದೊಂದು ಮರವೂ ತಿಮ್ಮಕ್ಕನ ಸೇವೆಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದೆ.
ರಾಜ್ಯ ಹೆದ್ದಾರಿ ಕಾಯ್ದೆ 1964 ಅಧ್ಯಾಯ-3 ಕ್ಲಾಸ್ 7(1)ರ ಅಡಿಯಲ್ಲಿ ಹೆದ್ದಾರಿ ರಸ್ತೆ ಗಡಿಗಳನ್ನು ಗುರುತಿಸುವ ಬಗ್ಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ರಾಮನಗರ ವಿಭಾಗದಿಂದ ಜೂನ್ 1ರಂದು ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಮನಗರ ತಾಲೂಕು ಹಾಗೂ ಮಾಗಡಿ ತಾಲೂಕಿನ ಗ್ರಾಮಗಳ ಸರ್ವೇ ನಂಬರ್ಗಳ ಬಗ್ಗೆ ಜಾಹೀರಾತು ಪ್ರಕಟವಾಗಿದೆ. ಅಲ್ಲಿರುವ 40 ಕಿ.ಮೀ ವರೆಗಿನ ಜಮೀನು ರಸ್ತೆ ವಿಸ್ತರಣೆಗೆ ಬಳಕೆಯಾಗುತ್ತಿದೆ.












Click it and Unblock the Notifications