ಮಗನ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟೀಕರಣ
Recommended Video
ಬೆಂಗಳೂರು, ಜೂನ್ 7: ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಹೇಳುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಗ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ನಿಖಿಲ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಯಾವ ಸಂದರ್ಭದಲ್ಲಿ ಬೇಕಾದರೂ ಬರಬಹುದು. ಒಂದು, ಎರಡು ಅಥವಾ ಮೂರು ವರ್ಷದಲ್ಲಿ ಬಂದರೂ ಬರಬಹುದು. ಅದಕ್ಕೆ ನಾವು ಮುಂದಿನ ತಿಂಗಳಿನಿಂದಲೇ ತಯಾರಿ ನಡೆಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಭೆಯ ವೇಳೆ ಸಲಹೆ ನೀಡಿದ್ದರು.
ಈ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ನಿಖಿಲ್ ಅವರ ಹೇಳಿಕೆಯನ್ನು ಗಮನಿಸಿದರೆ ರಾಜ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ. ಯಾವಾಗ ಬೇಕಾದರೂ ಸರ್ಕಾರ ಪತನಗೊಂಡು ಚುನಾವಣೆ ಎದುರಾಗಬಹುದು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಲು ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಬೇಕು ಎಂದು ವಿಶ್ಲೇಷಿಸಲಾಗಿತ್ತು.

ಕಾರ್ಯಕರ್ತರನ್ನು ಹುರಿದುಂಬಿಸಿರುವುದು
ಪಕ್ಷದ ಕಾರ್ಯಕರ್ತರು ಸದಾ ಸಮಾಜ ಸೇವೆಗೆ ಸನ್ನದ್ಧರಾಗಿರಬೇಕು. ಚುನಾವಣೆ ಕಾಲದಲ್ಲಿ ಮಾತ್ರ ಹೋರಾಟ ಎಂದಾಗದೇ ಯಾವಾಗ ಚುನಾವಣೆ ಎದುರಾದರೂ ಜಯಗಳಿಸುವ ಸ್ಥಿತಿಯಲ್ಲಿ ಪಕ್ಷವನ್ನು ಚುರುಕಾಗಿಟ್ಟಿರಬೇಕು ಎಂದು ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹುರಿದುಂಬಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಧ್ಯಂತರ ಚುನಾವಣೆ ಅಪ್ರಸ್ತುತ
ನಿಖಿಲ್ ಅವರ ಹೇಳಿಕೆಯನ್ನು ಇದನ್ನು ಸಂದರ್ಭರಹಿತವಾಗಿ ಉಲ್ಲೇಖಿಸಿ ಮಾಧ್ಯಮಗಳಲ್ಲಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎನ್ನುವಂತೆ ಬಿಂಬಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿ. ಮೈತ್ರಿ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ. ಮಧ್ಯಂತರ ಚುನಾವಣೆಯ ವಿಷಯವೇ ಈಗ ಅಪ್ರಸ್ತುತ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪಕ್ಷ ಸಂಘಟನೆಗಾಗಿ ಹೇಳಿದ್ದು
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನಿಖಿಲ್ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಉದ್ದೇಶ ಹೊಂದಿತ್ತು. ಸರ್ಕಾರ ಐದು ವರ್ಷ ಸುಭದ್ರವಾಗಿ ನಡೆಯುತ್ತದೆ. ಪಕ್ಷ ಸಂಘಟನೆಗಾಗಿ ನಿಖಿಲ್ ಹಾಗೆ ಹೇಳಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

ಯಾವಾಗ ಬೇಕಾದರೂ ಚುನಾವಣೆ
ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿ ಟೆನ್ಷನ್ ಆಗಬೇಡಿ. ಮುಂದಿನ ನಾಲ್ಕು ವರ್ಷವೂ ಕುಮಾರಣ್ಣ ಅವರೇ ಸರ್ಕಾರ ನಡೆಸುತ್ತಾರೆ. ಒಳಗಿರುವ ನಮಗೆ ಅದರ ಬಗ್ಗೆ ಗೊತ್ತಿದೆ. ಚುನಾವಣೆ ಯಾವಾಗ ನಡೆಯುತ್ತದೆಯೋ ಗೊತ್ತಿಲ್ಲ. ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಒಂದು ವರ್ಷಕ್ಕೋ, ಎರಡು ವರ್ಷಕ್ಕೋ ಬರಬಹುದು. ಹಾಗಾಗಿ ಈಗಿನಿಂದಲೇ ಅದಕ್ಕೆ ಎಲ್ಲ ತಯಾರಿ ನಡೆಸಿ ಸಿದ್ಧರಾಗಿರಿ ಎಂದು ನಿಖಿಲ್ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.











Click it and Unblock the Notifications