ಮೆಟ್ರೋ ಪ್ರಯಾಣದರ ಕಡಿಮೆಯಾಗುತ್ತಾ? ಸಿಎಂ ಸುದ್ದಿಗೋಷ್ಠಿಯಲ್ಲಿ ಏನಂದ್ರು?
ಬೆಂಗಳೂರು, ನವೆಂಬರ್ 06: ಬೆಂಗಳೂರಿಗರ ನೆಚ್ಚಿನ ಸಾರಿಗೆ ನಮ್ಮ ಮೆಟ್ರೋ ಪ್ರಯಾಣದರವನ್ನು ಕಡಿಮೆ ಮಾಡಲಾಗುತ್ತದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಎಂಟಿಸಿ ಬಸ್ ಪ್ರಯಾಣದರ ಕೆಲವೇ ದಿನಗಳಲ್ಲಿ ಕಡಿಮೆಯಾಗಲಿದೆ ಎಂದಿದ್ದಾರೆ.
ಆದರೆ ನಮ್ಮ ಮೆಟ್ರೋ ಪ್ರಯಾಣದರ ಇಳಿಕೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು. ಮೆಟ್ರೋ ಎರಡನೇ ಹಂತದ ಯೋಜನೆ ಇದೇ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದ ಅವರು 2022 ರ ವೇಳೆಗೆ ಮೆಟ್ರೋವನ್ನು 300 ಕಿ.ಮೀ. ವಿಸ್ತರಿಸಲು ಚಿಂತನೆ ನಡೆಯುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು.

ಬಿಎಂಟಿಸಿ ಬಸ್ ಪ್ರಯಾಣದರದಲ್ಲಿ ಇಳಿಕೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಪ್ರಯಾಣದರವನ್ನು ಇಳಿಕೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಬಿಎಂಟಿಸಿ ಗೆ ಹೊಸದಾಗಿ 6000 ಬಸ್ ಗಳನ್ನು ಸೇರ್ಪಡೆ ಮಾಡಿದ ನಂತರ ದರ ಇಳಿಕೆ ಅನ್ವಯವಾಗಲಿದೆ ಎಂದು ಅವರು ಹೇಳಿದರು.

ನಮ್ಮ ಮೆಟ್ರೋ ಹೊಸಕೋಟೆ ವರೆಗೆ ವಿಸ್ತರಣೆ
ಬೆಂಗಳೂರಿನ ಹೆಮ್ಮೆಯ ಸಾರಿಗೆ ನಮ್ಮ ಮೆಟ್ರೋವನ್ನು ಹೊಸಕೋಟೆವರೆಗೆ ವಿಸ್ತರಿಸಲು ತೀರ್ಮಾನಿಸಿರುವುದಾಗಿ ಬಿಎಸ್ ವೈ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಮೂಲಕ ಹೊಸಕೋಟೆಯ ಅನರ್ಹ ಶಾಸಕ ಎಂಟಿ ಬಿ ನಾಗರಾಜ್ ಅವರಿಗೆ ಸಿಎಂ ಭರ್ಜರಿ ಗಿಫ್ಟ್ ನೀಡಿದ್ದಾರೆ!

ಡಿಸೆಂಬರ್ ನಲ್ಲಿ ಮೆಟ್ರೋ ಕಾಮಗಾರಿ ಪೂರ್ಣ
ಇದೇ ಡಿಸೆಂಬರ್ ಅಂತ್ಯದ ಒಳಗೆ 2ನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣವಾಗಲಿದ್ದು, 2022 ರ ವೇಳೆಗೆ ಬೆಂಗಳೂರಉ ಮೆಟ್ರೋವನ್ನು 300 ಮಿ.ಮೀ. ವಿಸ್ತರಿಸುವ ಮತ್ತು 2020 ರ ಒಳಗೆ ಫಿಫೆರಲ್ ರಿಂಗ್ ರೋಡ್ ಪೂರ್ಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಕೆರೆ ಒತ್ತುವರಿ ನೆರವು
ಬೆಂಗಳೂರಿನ ಎಲ್ಲಾ ಕೆರೆಗಳ ನಿರ್ವಹಣೆಯ ಹೊಣೆಯನ್ನು ಬಿಬಿಎಂಪಿಗೆ ನೀಡಲು ನಿರ್ಧರಿಸಲಾಗಿದ್ದು, ಕೆರೆ ಒತ್ತುವರಿ ಪ್ರಕ್ರಿಯೆಯ ವೇಗ ಹೆಚ್ಚಿಸಲಾಗುವುದು ಎಂದಿರುವ ಯಡಿಯೂರಪ್ಪ, ಕೆರೆ ಪ್ರದೇಶದಲ್ಲಿ ವಾಸವಿದ್ದ ಬಡವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂಬ ಭರವಸೆಯನ್ನೂ ನೀದ್ದಾರೆ. ಇನ್ನು ಬೆಂಗಳೂರಿನ ಸ್ವಚ್ಛತೆಯ ದೃಷ್ಟಿಯಿಂದ ಕಸವಿಲೇವಾರಿಗೆ ವೈಜ್ಞಾನಿಕ ದಾರಿ ಹುಡುಕಲಾಗುವುದು ಎಂದು ಅವರು ಹೇಳಿದರು.












Click it and Unblock the Notifications