ಓಮಿಕ್ರಾನ್ ಭೀತಿ; ಕ್ರಿಸ್ಮಸ್ ಹಬ್ಬಕ್ಕೆ ಮಾರ್ಗಸೂಚಿ
ಬೆಂಗಳೂರು, ಡಿಸೆಂಬರ್ 12; ಓಮಿಕ್ರಾನ್ ಭೀತಿಯ ನಡುವೆಯೇ ವರ್ಷದ ಕೊನೆಯ ಹಬ್ಬವಾದ ಕ್ರಿಸ್ಮಸ್ ಬಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಈ ಕುರಿತು ಮಾಹಿತಿ ನೀಡಿದ್ದಾರೆ, "ಕ್ರಿಸ್ಮಸ್ ಆಚರಣೆಗೆ ಯಾವುದೇ ವಿಶೇಷ ಮಾರ್ಗಸೂಚಿ ಇರುವುದಿಲ್ಲ. ಆದರೆ ಕಡ್ಡಾಯಾವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು" ಎಂದರು.
"ಸ್ಯಾನಿಟೈಸರ್ ಬಳಕೆ ಮಾಡಬೇಕು. ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಚರ್ಚ್ ಬಳಿ ಹೆಚ್ಚು ಜನರು ಸೇರುವಂತಿಲ್ಲ. ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ" ಎಂದು ಬಿಬಿಎಂಪಿ ಆಯುಕ್ತರು ಹೇಳಿದರು.

"ಓಮಿಕ್ರಾನ್ ಭೀತಿಯಿಂದಾಗಿ ನಗರದಾದ್ಯಂತ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಪ್ರತಿನಿತ್ಯ 40 ರಿಂದ 50 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತದೆ. ಅವಶ್ಯಕತೆ ಬಿದ್ದರೆ ಪರೀಕ್ಷೆ ಪ್ರಮಾಣವನ್ನು ಇನ್ನೂ ಹೆಚ್ಚಿಸಲಾಗತ್ತದೆ" ಎಂದು ಆಯುಕ್ತರು ತಿಳಿಸಿದ್ದಾರೆ.
"ರೋಗ ಲಕ್ಷಣ ಇದ್ದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ಹೋಂ ಐಸೋಲೇಶನ್ನಲ್ಲಿರಬೇಕು. ನೆಗಡಿ, ಕೆಮ್ಮು ಮತ್ತಿತರ ರೋಗ ಲಕ್ಷಣಗಳಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇವೆ" ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 320 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7306. ಬೆಂಗಳೂರು ನಗರದಲ್ಲಿ 190 ಹೊಸ ಪ್ರಕರಣ ಪತ್ತೆಯಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 5547 ಆಗಿದೆ.
ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಚರಣೆಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ. ಸೋಮವಾರದಿಂದ ವಿಧಾನಸಭೆ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳು, ಶಾಸಕರು, ಸಚಿವರು, ಅಧಿಕಾರಿಗಳು ಅಲ್ಲಿಗೆ ತೆರಳಲಿದ್ದಾರೆ.
ಹೊಸ ವರ್ಷ ಮತ್ತು ಕ್ರಿಸ್ ಮಸ್ ಅಚರಣೆಗೆ ನಿರ್ಬಂಧ ಹೇರುವ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಮಾತುಕತೆಗಳು ನಡೆದಿಲ್ಲ. ಬಿಬಿಎಂಪಿಗೆ ಸಹ ಈ ಕುರಿತು ಯಾವುದೇ ಮನವಿಗಳು ಬಂದಿಲ್ಲ.
ಬೆಂಗಳೂರು ನಗರದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ ಒಬ್ಬ ಸೋಂಕಿತರ ವರದಿ ನಗೆಟಿವ್ ಬಂದಿದ್ದು, ಅವರು ದಕ್ಷಿಣ ಆಫ್ರಿಕಾಕ್ಕೆ ವಾಪಸ್ ಆಗಿದ್ದಾರೆ. ಬಳಿಕ ಯಾವುದೇ ಹೊಸ ಪ್ರಕರಣ ಬೆಂಗಳೂರು ನಗರದಲ್ಲಿ ಪತ್ತೆಯಾಗಿಲ್ಲ.
ಹಬ್ಬಗಳ ಆಚರಣೆಗೆ ನಿಷೇಧ ಹೇರುವ ಕುರಿತು ಅಥವ ಮಾರ್ಗಸೂಚಿ ಬಿಡುಗಡೆ ಮಾಡುವ ಕುರಿತು ಡಿಸೆಂಬರ್ 20ರ ವೇಳೆಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಯಲ್ಲಿದೆ.
ಕಳೆದ ವರ್ಷ ಬೆಂಗಳೂರಿನ ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ನಿಷೇಧ ಹೇರಿತ್ತು. ಹೊಸ ವರ್ಷದ ಆಚರಣೆಗಾಗಿಯೇ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ವರ್ಷವೂ ಮಾರ್ಗಸೂಚಿ ಹೊರಬೀಳಲಿದೆಯೇ? ಕಾದು ನೋಡಬೇಕು.
ಕರ್ನಾಟಕದ ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಮುಂಚೂಣಿಯಲ್ಲಿದೆ. ಲಸಿಕೆ ಹಾಗೂ ಇತರೆ ನಿಯಂತ್ರಣ ಕ್ರಮಗಳಿಂದ ಸೋಂಕನ್ನು ಹತೋಟಿದೆ ತಂದಿದೆ. ಸಾರ್ವಜನಿಕರು ಇನ್ನು ಮುಂದೆಯೂ ತಪ್ಪದೇ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆ ಇದೆ. ಕೇರಳದಲ್ಲಿ ಶೇ 7, ಮಹಾರಾಷ್ಟ್ರದಲ್ಲಿ ಶೇ 1.1, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಶೇ 0.5, ತಮಿಳುನಾಡಿನಲ್ಲಿ ಶೇ 0.7 ಪ್ರತಿದಿನ ಪಾಸಿಟಿವಿಟಿ ದರವಿದೆ.
ಓಮಿಕ್ರಾನ್ ಸೋಂಕು ಪತ್ತೆಯಾದ ಬಳಿಕ ಪ್ರತಿ ಜಿಲ್ಲೆಯಲ್ಲಿಯೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಆದರೆ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.












Click it and Unblock the Notifications