ಸಕಲ ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ
ಬೆಂಗಳೂರು, ಜನವರಿ 12 : ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಬೆಂಗಳೂರಿನಲ್ಲಿ ನಡೆಯಿತು. ಜನವರಿ 11ರ ಮುಂಜಾನೆ ಅವರು ವಿಧಿವಶರಾಗಿದ್ದರು.
ಸುಮನಹಳ್ಳಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ ಬೆಳಗ್ಗೆ 11ಗಂಟೆಗೆ ಅಂತ್ಯಕ್ರಿಯೆಯನ್ನು ಯಾವುದೇ ಪೂಜಾ ವಿಧಿವಿಧಾನಗಳಿಲ್ಲದೆ ನಡೆಸಲಾಯಿತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವ ವಿ. ಸೋಮಣ್ಣ ಮುಂತಾದವರು ಉಪಸ್ಥಿತರಿದ್ದರು.

ಯಾವುದೇ ಮೆರವಣಿಗೆ ಇಲ್ಲದೆ ಚಿದಾನಂದಮೂರ್ತಿ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಸುಮನಹಳ್ಳಿಯ ಚಿತಾಗಾರಕ್ಕೆ ತರಲಾಯಿತು. ಬಿ. ಎಸ್. ಯಡಿಯೂರಪ್ಪ ಅಂತಿಮವಾಗಿ ಪುಷ್ಪ ನಮನ ಸಲ್ಲಿಸಿದರು.
ಸರ್ಕಾರದ ಪರವಾಗಿ ಪೊಲೀಸರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬಸ್ಥರು ಚಿದಾನಂದಮೂರ್ತಿ ಅಂತಿಮ ಇಚ್ಛೆಯಂತೆ ಯಾವುದೇ ಪೂಜೆಯನ್ನು ಮಾಡದೆ ಅಂತ್ಯ ಸಂಸ್ಕಾರವನ್ನು ಮಾಡಿದರು.
ಶನಿವಾರ ಮುಂಜಾನೆ ಡಾ. ಎಂ. ಚಿದಾನಂದಮೂರ್ತಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬಳಿಕ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.
75ಕ್ಕೂ ಅಧಿಕ ಕೃತಿ, 400ಕ್ಕೂ ಅಧಿಕ ಪ್ರಬಂಧಗಳನ್ನು ಪ್ರಕಟಿಸಿದ್ದ ಡಾ. ಎಂ. ಚಿದಾನಂದಮೂರ್ತಿ ಅವರ ಸಾವಿನಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅಪಾರವಾದ ನಷ್ಟವಾಗಿದೆ.












Click it and Unblock the Notifications