ಶಿವನಹಳ್ಳಿ ಗ್ರಾಮಸ್ಥರಿಗೆ ಹಸು ಖರೀದಿಸಲು ಚೆಕ್ ವಿತರಣೆ
ಬೆಂಗಳೂರು, ಜು. 11 : ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಹಳ್ಳಿಯಲ್ಲಿ ಹೈನುಗಾರಿಕೆಗೆ ಅನುಕೂಲವಾಗುವಂತೆ 'ಪ್ರತಿ ಮನೆಗೆ ಹಸು' ಎಂಬ ಕಾರ್ಯಕ್ರಮದಡಿ ಹಸುಗಳನ್ನು ಖರೀದಿಸಲು ಗ್ರಾಮಸ್ಥರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ಶನಿವಾರ ಚೆಕ್ ವಿತರಿಸಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಅನಂತ್ ಕುಮಾರ್ ಅವರು ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಆದರ್ಶ ಗ್ರಾಮ ಯೋಜನೆಯಡಿ ದತ್ತು ತೆಗೆದುಕೊಂಡಿದ್ದಾರೆ. ಇದೇ ರಾಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಿವನಹಳ್ಳಿಯಲ್ಲಿ ಹಳ್ಳಿಗರಿಗೆ ಚೆಕ್ ವಿತರಿಸಲಾಯಿತು.
ಇಂದಿನ ಆಧುನಿಕ ಜೀವನದಲ್ಲಿ ಕಾಡು, ಹಳ್ಳಿ, ಹಸುಗಳ ರಕ್ಷಣೆ ಮಾಡಬೇಕಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 700 ಕುಟುಂಬಗಳಿಗೆ ಕೇವಲ 200 ಹಸುಗಳಿವೆ. ಮನೆಗೊಂದು ಹಸು ಎಂಬಂತೆ ಮುಂದಿನ ವರ್ಷದೊಳಗೆ 1000 ಹಸುಗಳನ್ನು ಕೊಡುವ ಗುರಿ ಹೊಂದಿದ್ದೇವೆ. ಇದರಿಂದ ಗ್ರಾಮಸ್ಥರ ಜೀವನ ಮಟ್ಟ ಸುಧಾರಿಸಲಿದೆ ಮತ್ತು ಗ್ರಾಮದ ಏಳ್ಗೆಯಾಗಲಿದೆ ಎಂದು ಅನಂತ್ ಕುಮಾರ್ರವರು ಹೇಳಿದರು.

ಹಸಿರು ಕ್ರಾಂತಿ ಜೊತೆ ಕ್ಷೀರ ಕ್ರಾಂತಿ
ಹಸಿರು ಕ್ರಾಂತಿಯ ಜೊತೆಗೆ ಬಿಳಿ ಕ್ರಾಂತಿಯ (ಕ್ಷೀರ ಕ್ರಾಂತಿ) ಅಗತ್ಯತೆ ಇದೆ. ಹಳ್ಳಿಗಳಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಅದಮ್ಯ ಚೇತನ' ಸಂಸ್ಥೆಯು 'ಗೋಚೇತನ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಸುಗಳನ್ನು ಖರೀದಿಸಲು ಬಡ್ಡಿ ರಹಿತ ಹಣಕಾಸು ಸೌಲಭ್ಯವನ್ನು ರಾಗಿಹಳ್ಳಿ ಪಂಚಾಯಿತಿಯ ಗ್ರಾಮಸ್ಥರಿಗೆ ನೀಡುತ್ತಿದೆ.

ಸ್ವಾವಲಂಬನೆಯ ಬದುಕಿಗೆ ಗೋವು ಆಧಾರ
ಗ್ರಾಮೀಣ ಭಾಗದಲ್ಲಿ ಮನೆಗೊಂದು ಗೋವು ಕಾರ್ಯಕ್ರಮದಿಂದ ಪ್ರಕೃತಿ ರಕ್ಷಣೆ ಹಾಗು ಗ್ರಾಮಸ್ಥರ ಜೀವನ ಮಟ್ಟವನ್ನು ಅವರ ಸ್ವಾವಲಂಬನೆಯಿಂದಲೇ ಮಾಡಬಹುದು. ಸ್ವಾವಲಂಬನೆಯ ಬದುಕಿಗೆ ಗೋವು ಆಧಾರ. ಈ ಬಗ್ಗೆ ರಾಷ್ಟ್ರವ್ಯಾಪಿ ಯೋಜನೆ ರೂಪಿಸಲು ಪ್ರಯತ್ನ ಮಾಡಲಾಗುವುದು. ಇದರ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಅನಂತ್ ತಿಳಿಸಿದರು.

ಹೈನುಗಾರಿಕೆಗೆ ಬಡ್ಡಿರಹಿತ ಸಾಲ
ಯೋಜನೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ರವರು ರಾಗಿಹಳ್ಳಿ ಪಂಚಾಯಿತಿಯ ಗ್ರಾಮಸ್ಥರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರತಿ ಹಸುವಿಗೆ ರು. 30 ಸಾವಿರಂತೆ ಬಡ್ಡಿರಹಿತ ಹಣಕಾಸು ನೆರವು ನೀಡುತ್ತಿದ್ದು ಇದರ ಮರು ಪಾವತಿಯನ್ನು ತಿಂಗಳಿಗೆ 1 ಸಾವಿರದಂತೆ ಪಾವತಿಸಬೇಕಾಗಿದೆ ಎಂದರು.

ಡಿಜಿಟಲ್ ಇಂಡಿಯಾ ಅಡಿಯಲ್ಲಿ ರಾಗಿಹಳ್ಳಿ
ಡಿಜಿಟಲ್ ಇಂಡಿಯಾ ಯೋಜನೆಯಡಿ ಕರ್ನಾಟಕದ 40 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಅನಂತ್ ಕುಮಾರ್ ಅವರು ದತ್ತು ತೆಗೆದುಕೊಂಡಿರುವ ರಾಗಿಹಳ್ಳಿ ಕೂಡ ಒಂದು.












Click it and Unblock the Notifications